ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸಿದ ಬೈಕ್-ಟ್ಯಾಂಕರ್ ಭೀಕರ ಅಪಘಾತದಲ್ಲಿ ಸಿನಿಮಾ ನಿರ್ದೇಶಕರ ಪುತ್ರ ಸಾವನ್ನಪ್ಪಿದ್ದಾನೆ.
ಬೈಕ್ ಗೆ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಸಿನಿಮಾ ನಿರ್ದೇಶಕರೊಬ್ಬರ ಪುತ್ರ ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ತುಳು ಮತ್ತು ಕನ್ನಡ ಸಿನಿಮಾ ನಿರ್ದೇಶಕ ಸೂರ್ಯೋದಯ ಪೆರಂಪಲ್ಲಿ ಅವರ ಪುತ್ರ ಮಯೂರ್ (20) ಮೃತಪಟ್ಟ ಬೈಕ್ ಸವಾರನಾಗಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮಯೂರ್ ಸಾವನ್ನಪ್ಪಿದ್ದಾರೆ.
ಸ್ನೇಹಿತನ ಕೆಟಿಎಂ ಬೈಕ್ ಪಡೆದಿದ್ದ ಮಯೂರ್, ನ್ಯೂಲಿಂಕ್ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದ್ದ ಮಯೂರ್ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮಯೂರ್ ತಮ್ಮ 300 ಸಿಸಿ ಮೋಟಾರು ಬೈಕನ್ನು ವೇಗವಾಗಿ ಚಾಲನೆ ಮಾಡುತ್ತಿದ್ದರು. ಈ ವೇಳೆ ಹಿಂದಿನಿಂದ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಮಯೂರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆ ಸಂಬಂಧ ಟ್ಯಾಂಕರ್ ಚಾಲಕ ಮಣಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಮೃತರ ತಂದೆ ಸೂರ್ಯೋದಯ ಅವರು ‘ದೇಯಿ ಬೈದೆತಿ’ ಎಂಬ ತುಳು ಹಾಗೂ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
Advertisement