ಕಾವೇರಿ ಆಯ್ತು ಇದೀಗ ಮಾರ್ಕಂಡೇಯ ನದಿ ನೀರಿಗೆ ತಮಿಳುನಾಡು ಖ್ಯಾತೆ!

ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರ ಪಟ್ಟಣಗಳಿಗೆ ನೀರು ಪೂರೈಸುವ, ಕರ್ನಾಟದಲ್ಲಿ ದಕ್ಷಿಣ ಪಿನಾಕಿನಿ ಎಂದು ಕರೆಯಲ್ಪಡುವ ಪೊನ್ನೈಯಾರ್‌ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟು ಯೋಜನೆ ವಿರುದ್ಧ ತಮಿಳುನಾಡು ಖ್ಯಾತೆ ತೆಗೆದಿದ್ದು, ನ್ಯಾಯಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಮಾರ್ಕಂಡೇಯ ನದಿ
ಮಾರ್ಕಂಡೇಯ ನದಿ

ಚೆನ್ನೈ: ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರ ಪಟ್ಟಣಗಳಿಗೆ ನೀರು ಪೂರೈಸುವ, ಕರ್ನಾಟದಲ್ಲಿ ದಕ್ಷಿಣ ಪಿನಾಕಿನಿ ಎಂದು ಕರೆಯಲ್ಪಡುವ ಪೊನ್ನೈಯಾರ್‌ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟು ಯೋಜನೆ ವಿರುದ್ಧ ತಮಿಳುನಾಡು ಖ್ಯಾತೆ ತೆಗೆದಿದ್ದು, ನ್ಯಾಯಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಈ ಬಗ್ಗೆ ಮಾತನಾಡಿರುವ ತಮಿಳುನಾಡು ಜಲ ಸಂಪನ್ಮೂಲ ಸಚಿವ ಎಸ್. ದೊರೈ ಮುರುಗನ್, ಕರ್ನಾಟಕ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿರುವುದರಿಂದ ಕೃಷ್ಣಗಿರಿ ಜಿಲ್ಲೆಯ 870 ಹೆಕ್ಟೇರ್‌ ಪ್ರದೇಶದ ನಿರಾವರಿ ಪ್ರದೇಶಕ್ಕೆ ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ನದಿ ವಿವಾದ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಮಂಡಳಿ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

ಇದೇ ವೇಳೆ ತಮಿಳುನಾಡಿನ ರೈತರ ಹಿತದೃಷ್ಟಿಯಿಂದ ಮತ್ತು ರಾಜ್ಯದ ಹಕ್ಕನ್ನು ಎತ್ತಿಹಿಡಿಯುವ ನಿಟ್ಟಿನಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತಮಿಳುನಾಡು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಈ ಯೋಜನೆಗೆ ತಮಿಳುನಾಡು ಸರ್ಕಾರ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸಿತ್ತು. ಯೋಜನೆಗೆ ತಡೆ ನೀಡುವಂತೆ 2018ರಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಇದರ ಹೊರತಾಗಿಯೂ ಡ್ಯಾಂ ನಿರ್ಮಾಣ ಯೋಜನೆ ಬಹುತೆಕ ಪೂರ್ಣಗೊಳ್ಳುವ ಹಂತ ತಲುಪಿದೆ ಎಂದು ಅವರು ಆರೋಪಿಸಿದ್ದಾರೆ.

ಏನಿದು ವಿವಾದ? 
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಉಗಮವಾದ ಮಾರ್ಕಂಡೇಯ ನದಿ, ಕರ್ನಾಟಕದ ಕೋಲಾರ, ಹೊಸಕೋಟೆ, ಕಾಡುಗೋಡಿ, ಬಾಗಲೂರು, ಹೊಸೂರಿನ ಮೂಲಕ ಹರಿದು ತಮಿಳುನಾಡಿನ ಪೊನ್ನೈಯಾರ್‌ ನದಿಯನ್ನು ಸೇರುತ್ತದೆ. 

ಕೋಲಾರದ ಬಂಗಾರಪೇಟೆ ತಾಲೂಕಿನ ಯರಗೋಲ್‌ ಗ್ರಾಮದ ಸಮೀಪ ಡ್ಯಾಮ್‌ ನಿರ್ಮಿಲಾಗಿದೆ. 0.5 ಟಿಎಂಎಸಿ ಸಾಮರ್ಥ್ಯದ ಡ್ಯಾಂ ಇದಾಗಿದೆ. ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಡ್ಯಾಂ ನಿರ್ಮಿಸಲಾಗಿದ್ದು, ಇದರಿಂದ ತಮಿಳುನಾಡಿಗೆ ಹರಿಯುವ ನೀರಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಈಗಾಗಲೇ ಸಷ್ಟಪಡಿಸಿದೆ. ಇದರ ಹೊರತಾಗಿಯೂ ಯೋಜನೆಗೆ ತಮಿಳುನಾಡು ಸರ್ಕಾರ ಖ್ಯಾತೆ ತೆಗೆಯುತ್ತಲೇ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com