ವಿನಾಶದ ಅಂಚಿನಲ್ಲಿರುವ ಸಸ್ಯ-ಪ್ರಾಣಿ ಪ್ರಭೇದ, ಜೋಗ ಜಲಪಾತ ರಕ್ಷಿಸಿ: ಜೀವವೈವಿಧ್ಯ ಮಂಡಳಿ

ಜೋಗ ಜಲಪಾತಗಳ ಜೀವಂತವಾಗಿಡಲು ಹಾಗೂ ಅವುಗಳು ತುಂಬಿ ಹರಿಯುವಂತಿರಲು, ವಿನಾಶದ ಅಂಚಿನ ವೃಕ್ಷ, ಪ್ರಾಣಿ ಪ್ರಭೇದಗಳ ಸಂರಕ್ಷಣೆ ಮಾಡುವ ಅಗತ್ಯಗಳಿವೆ ಜೀವವೈವಿಧ್ಯ ಮಂಡಳಿ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜೋಗ ಜಲಪಾತಗಳ ಜೀವಂತವಾಗಿಡಲು ಹಾಗೂ ಅವುಗಳು ತುಂಬಿ ಹರಿಯುವಂತಿರಲು, ವಿನಾಶದ ಅಂಚಿನ ವೃಕ್ಷ, ಪ್ರಾಣಿ ಪ್ರಭೇದಗಳ ಸಂರಕ್ಷಣೆ ಮಾಡುವ ಅಗತ್ಯಗಳಿವೆ ಜೀವವೈವಿಧ್ಯ ಮಂಡಳಿ ಹೇಳಿದೆ. 

ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದ ಸಮಿತಿಯು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಬುಧವಾರ ವರದಿ ಸಲ್ಲಿಸಿತು. 

ವರದಿಯಲ್ಲಿ ವಿನಾಶದ ಅಂಚಿನಲ್ಲಿರುವ ಪುನಗಿನ ಬೆಕ್ಕು, ಕಾಡುಪಾಪ, ನೀರಾನೆ, ಬಾವಲಿ, ತಿಮಿಂಗಿಲ ಪ್ರಭೇದಗಳು ಸೇರಿದಂತೆ, ಒಟ್ಟೂ 40 ಸಸ್ತನಿಗಳನ್ನು ವಿನಾಶದಂಚಿಗೆ ತಲುಪಿದವು. ಸೀತಾ ಅಶೋಕ, ಮರದರಶಿನ, ಭೂತಾಳಗಿಡ, ಎಣ್ಣೆಮರ, ನೀರನೇರಳೆ ಇತ್ಯಾದಿ ಪ್ರಭೇದಗಳು ಸೇರಿದಂತೆ, ಒಟ್ಟೂ 16 ಪ್ರಭೇದಗಳಿವೆ. ವಿನಾಶದ ಅಂಚಿನ ಸಸ್ಯ-ಪ್ರಾಣಿ ಪ್ರಭೇದ ಪರಿಷ್ಕøತ ಪಟ್ಟಿಯನ್ನು ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ತಲುಪಿಸಬೇಕು. 

ಅರಣ್ಯ ಸಂರಕ್ಷಣಾ ಯೋಜನೆಗಳಲ್ಲಿ ವಿನಾಶದ ಅಂಚಿನ ಸಸ್ಯ-ಪ್ರಾಣಿ ವೈವಿಧ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ತೋಟಗಾರಿಕೆ, ಮೀನುಗಾರಿಕಾ ಇಲಾಖೆ ಸೇರಿ ತಮ್ಮ ವ್ಯಾಪ್ತಿಯಲ್ಲಿನ ಈ ಪ್ರಭೇದಗಳ ರಕ್ಷಣೆಗೆ ಮತ್ತು ಸಂವರ್ಧನೆಗೆ ಆದ್ಯತೆ ನೀಡಬೇಕು. ಅರಣ್ಯ ಇಲಾಖೆಯ ನರ್ಸರಿ ಯೋಜನೆಯಲ್ಲಿ, ಔಷಧಿ ಸಸ್ಯ ಸಂರಕ್ಷಿತ ಪ್ರದೇಶ, ಪವಿತ್ರವನ ಯೋಜನೆಗಳಲ್ಲಿ ವಿನಾಶದ ಅಂಚಿನ ಸಸ್ಯ ಪ್ರಭೇದಗಳಿಗೆ ಪುರಸ್ಕಾರ ಸಿಗಬೇಕು ಎಂದು ಶಿಫಾರಸು ಮಾಡಿದೆ. 

ಜೀವವೈವಿಧ್ಯ ಕಾಯಿದೆ ಅನ್ವಯ-2010ರಲ್ಲಿ ವಿನಾಶದ ಅಂಚಿನ ಹೂ ಬಿಡುವ ಸಸ್ಯಗಳು ಹಾಗೂ ಕಶೇರುಕ ಪ್ರಾಣಿಗಳನ್ನು ಮಂಡಳಿಯ ತಜ್ಞರ ಸಹಾಯದೊಂದಿಗೆ ಗುರುತಿಸಲಾಗಿತ್ತು. ಈ ಪಟ್ಟಿಯನ್ನು ಕೇಂದ್ರದ ಅರಣ್ಯ ಮಂತ್ರಾಲಯ ಗೆಜೆಟ್‍ನಲ್ಲಿ ಪ್ರಕಟಿಸಿತ್ತು. ಇದೀಗ 2020-21ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ತಜ್ಞರ ಸಮಿತಿ ರಚಿಸಿ 2010ರ ಪಟ್ಟಿಯನ್ನು ಪರಿಷ್ಕಾರ ಮಾಡಿದೆ. 

ಈ ತಜ್ಞ ಸಮಿತಿ ನೀಡಿದ ವರದಿಯನ್ನು ಮಂಡಳಿ ಜನವರಿ 2021ರಲ್ಲಿ ಅಂಗೀಕರಿಸಿದೆ. ಪರಿಷ್ಕರಿಸಿರುವ ಪಟ್ಟಿಯನ್ನು ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ ಸಲ್ಲಿಸಲಿದೆ. ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

2010ರಲ್ಲಿ 16 ವಿನಾಶದ ಅಂಚಿನ ಸಸ್ಯ ಪ್ರಭೇದ ಗುರುತಿಸಲಾಗಿತ್ತು. 2021ರಲ್ಲಿ ಇದೀಗ ಹಿಂದಿನ 16 ಪ್ರಭೇದ ಸೇರಿ ಒಟ್ಟು 32 ಪ್ರಭೇದಗಳನ್ನು ವಿನಾಶದ ಅಂಚಿನಲ್ಲಿದೆ ಎಂದು ಗುರುತಿಸಲಾಗಿದೆ. ವ್ಯಾಪಕ ವಾಣೀಜ್ಯೀಕರಣಕ್ಕೆ ಒಳಗಾಗಿರುವ ಕಾಡಿನ ಸಸ್ಯಪ್ರಭೇದಗಳ ಸಂಖ್ಯೆ 7. ರಾಜ್ಯದ 40 ಸಸ್ತನಿಗಳನ್ನು 2021ರಲ್ಲಿ ವಿನಾಶದ ಅಂಚಿನ ಪ್ರಭೇದಗಳು ಎಂದು ಗುರುತಿಸಲಾಗಿದೆ. ಅಪಾಯದ ಅಂಚಿನ ಪಕ್ಷಿ ಪ್ರಭೇದಗಳು 23. ಸರೀಸೃಪ ಪ್ರಭೇದಗಳು 26, ಉಭಯವಾಸಿ ಪ್ರಭೇದಗಳು 21, ಸಿಹಿನೀರು ಮೀನುಪ್ರಭೇದಗಳು 53, ಸಮುದ್ರ ಮೀನಿನ ಪ್ರಭೇದಗಳು 35. ವಿನಾಶದ ಅಂಚಿನ ಅಕಶೇರುಕ ಪ್ರಭೇದಗಳನ್ನು ಗುರುತಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇರುವ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡದಿಂದಾಗಿ, ನಾಡಿನ ಅಪಾರ ಬಗೆಯ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಇದು ಭವಿಷ್ಯದ ನೀರು, ಆಹಾರ, ಪರಿಸರ ಸುರಕ್ಷತೆ ಇತ್ಯಾದಿಗಳ ಸುರಕ್ಷತೆಗೆ ಮಾರಕವಾಗಬಲ್ಲ ಸಂಗತಿ. ಹೀಗಾಗಿ, `ಜೀವವೈವಿಧ್ಯ ಕಾನೂನು' ಅಡಿ, ಈ ಬಗೆಯ ವಿನಾಶದಂಚಿಗೆ ತಲುಪಿರುವ ಪ್ರಭೇದಗಳನ್ನು ಕಾಲಕಾಲಕ್ಕೆ ಗುರುತಿಸಿ, ಸಂರಕ್ಷಿಸುವ ಜವಾಬ್ದಾರಿಯಿದೆ. ಈ ಹಿನ್ನೆಲೆಯಲ್ಲಿ, `ಕರ್ನಾಟಕ ಜೀವವೈವಿಧ್ಯ ಮಂಡಳಿ'ಯು ರಾಜ್ಯದ ವಿನಾಶದಂಚಿನ ಸಸ್ಯ ಹಾಗೂ ಪ್ರಾಣಿಪ್ರಭೇದಗಳ ಪಟ್ಟಿಯನ್ನು ತಜ್ಞರ ಸಮಿತಿಯ ಮೂಲಕ ಪರಿಷ್ಕರಿಸಿದೆ. 

ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸದಸ್ಯ-ಕಾರ್ಯದರ್ಶಿ ಪುನೀತ್ ಪಾಠಕ್ ಅವರು ಮಾತನಾಡಿ, ಯಾವುದನ್ನು ಉತ್ತಮವಾಗಿ ಸಂರಕ್ಷಿಸಬೇಕು ಎಂಬುದರ ಬಗ್ಗೆ ಗಮನ ಹರಿಸಲು ಸರ್ಕಾರ ಮತ್ತು ನಾಗರೀಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com