ಧಾರವಾಡ: ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಜಗಳವಾಡಿ ಪತ್ನಿಯ ಮೂಗನ್ನು ಕಚ್ಚಿ ಗಾಯಗೊಳಿಸಿದ ಪತಿ ಪರಾರಿಯಾಗಿರುವ ಘಟನೆ ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.
ಉಮೇಶ್ ಎಂಬಾತ ಪತ್ನಿ ಗೀತಾಳ ಮೂಗು ಕಚ್ಚಿ ಗಾಯಗೊಳಿಸಿದ್ದಲ್ಲದೆ ಪತ್ನಿಯ ಮೇಲೆ ಹಲ್ಲೆ ನಡೆಸುವುದನ್ನು ತಡೆಯಲು ಬಂದ ಅತ್ತೆಯ ಕತ್ತು ಹಿಸುಕಿ ಅವಳ ಮೇಲೆ ಸಹ ಹಲ್ಲೆ ಮಾಡಿದ್ದಾನೆ.
ಗಾರೆ ಕೆಲಸ ಮಾಡುವ ಉಮೇಶ್ ಕಳೆದ ಐದು ವರ್ಷದ ಹಿಂದೆ ಪತ್ನಿಯನ್ನು ಬಿಟ್ಟು ಹೋದವನು ಐದು ತಿಂಗಳ ಹಿಂದೆ ವಾಪಾಸಾಗಿದ್ದ.
ಆದರೆ ಹಾಗೆ ಹಿಂತಿರುಗಿದವ ಮದ್ಯ ಸೇವಿಸಲಿಕ್ಕಾಗಿ ಹಣ ನೀಡುವಂತೆ ಪ್ರತಿ ದಿನ ಗೀತಾಳ ಜತೆ ಜಗಳವಾಡುತ್ತಿದ್ದ. ಕಳೆದ ರಾತ್ರಿ ಸಹ ಇದೇ ವಿಷಯದಲ್ಲಿ ಜಗಳವಾದಾಗ ಉಮೇಶ್ ಆಕೆಯ ಮೂಗನ್ನು ಕಚ್ಚಿ ಕತ್ತರಿಸಿದ್ದಾನೆ.
ಗೀತಾಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ಈ ಕೃತ್ಯದ ಬಗ್ಗೆ ಗೀತಾ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಉಮೇಶ್ ಗಾಗಿ ಪೋಲೀಸರ ಶೋಧ ಮುಂದುವರಿದಿದೆ.
Advertisement