ಬೆಂಗಳೂರು: ಕರ್ನಾಟಕದ ಯಾತ್ರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಇದೀಗ ಕರ್ನಾಟಕದ ಕೆಎಸ್ ಆರ್ ಟಿಸಿ ಸಾರಿಗೆ ಸಂಸ್ಥೆ ಕೂಡ ಇದೀಗ ತಿರುಪತಿ ದರ್ಶನ ಪ್ಯಾಕೇಜ್ ಆರಂಭಿಸಿದೆ.
ಇದೇ ಶುಕ್ರವಾರದಿಂದ ಅಂದರೆ ಜು.16ರಿಂದಲೇ ಕೆಎಸ್ಆರ್ಟಿಸಿ ಮತ್ತೆ ಆರಂಭಿಸಲಿದ್ದು, ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಯಾತ್ರಿಕರನ್ನು ಕರೆದೊಯ್ಯಲಾಗುತ್ತದೆ. ಈ ಕುರಿತಂತೆ ಕೆಎಸ್ ಆರ್ ಟಿಸಿ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಐರಾವತ ಕ್ಲಬ್ ಕ್ಲಾಸ್(ಮಲ್ಟಿ ಆಕ್ಸೆಲ್) ಬಸ್ನಲ್ಲಿ ಪ್ರವಾಸ ಕರೆದೊಯ್ಯಲಾಗುತ್ತದೆ.
ಪ್ರಕಟಣೆಯಲ್ಲಿರುವಂತೆ ಪ್ರತಿದಿನ ರಾತ್ರಿ 8.45ಕ್ಕೆ ಶಾಂತಿನಗರ ನಿಲ್ದಾಣದಿಂದ ಬಸ್ ಹೊರಡಲಿದೆ. ಜಯನಗರ, ನಾಗಸಂದ್ರ, ಎನ್.ಆರ್.ಕಾಲೊನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತಹಳ್ಳಿ, ಐಟಿಐ ಗೇಟ್ ಮತ್ತು ಕೆ.ಆರ್.ಪುರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊಸಕೋಟೆ ಮಾರ್ಗದಲ್ಲಿ ಪ್ರಯಾಣ ಮುಂದುವರಿಸಲಾಗುವುದು. ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ರಾತ್ರಿ 8.30ಕ್ಕೆ ಹೊರಡುವ ಮತ್ತೊಂದು ಬಸ್, ವಿಜಯನಗರ ಟಿಟಿಎಂಸಿ, ನವರಂಗ್, ಮಲ್ಲೇಶ್ವರ ವೃತ್ತ, ಕೆಂಪೇಗೌಡ ಬಸ್ ನಿಲ್ದಾಣ, ಐಟಿಐ ಗೇಟ್, ಕೆ.ಆರ್.ಪುರ ಮಾರ್ಗದಲ್ಲಿ ತಿರುಪತಿಗೆ ಪ್ರಯಾಣ ಮುಂದುವರಿಯಲಿದೆ.
ಭಾನುವಾರದಿಂದ ಗುರುವಾರದ ತನಕ ವಯಸ್ಕರಿಗೆ ಪ್ರಯಾಣದರ 2,200ರೂ ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 1,800 ರೂ ದರ ನಿಗದಿ ಮಾಡಲಾಗಿದೆ. ವಾರಾಂತ್ಯದ ದಿನ (ಶುಕ್ರವಾರ ಮತ್ತು ಶನಿವಾರ) ವಯಸ್ಕರಿಗೆ 2,600ರೂ ಮತ್ತು ಮಕ್ಕಳಿಗೆ 2,000ರೂ ನಿಗದಿ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement