ಮೈಸೂರು: ಮೈಸೂರಿನ ಪ್ರಸಿದ್ಧ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಲಾಕ್ ಡೌನ್ ಮುನ್ನ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ನಟ ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೋಟೆಲ್ ಸಪ್ಲೈಯರ್ ಗಂಗಾಧರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಹೋಟೆಲ್ ನ ದಲಿತ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿನ್ನೆ ಗೃಹ ಸಚಿವರಿಗೆ ಮನವಿ ಮಾಡಿದ್ದರು. ಗೃಹ ಸಚಿವರ ಸೂಚನೆ ಮೇರೆಗೆ ಪೊಲೀಸ್ ಅಧಿಕಾರಿಗಳು ಇಂದು ಹೋಟೆಲ್ ಗೆ ಭೇಟಿ ನೀಡಿ, ಮಾಲೀಕ ಸಂದೇಶ್ ಹಾಗೂ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಪ್ಲೈಯರ್ ಗಂಗಾಧರ್ ಅವರಿಂದ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ ಗಂಗಾಧರ್, ಊಟ ತರುವುದು ಸ್ವಲ್ಪ ತಡವಾಗಿತ್ತು. ಹೀಗಾಗಿ ದರ್ಶನ್ ರೇಗಾಡಿದ್ದಾರೆ ಹೊರತು ಯಾವುದೇ ಹಲ್ಲೆ ನಡೆಸಿಲ್ಲ. ಕಣ್ಣುಗಳು ಕೂಡಾ ಸರಿಯಾಗಿವೇ ಇವೇ, ಯಾವುದೇ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ತಾನು ದಲಿತ ಅಲ್ಲ, ನಾಯರ್ ಸಮುದಾಯದವರು. ಆದರೆ, ಇಂದ್ರಜಿತ್ ಲಂಕೇಶ್ ದಲಿತಾ ಅಂತಾ ಸುಳ್ಳು ಆರೋಪ ಮಾಡಿದ್ದಾರೆ. ಘಟನೆ ನಡೆದ ಬಳಿಕ ಪೊರಕೆ ತಂದವರು ಯಾರೆಂಬುದು ಗೊತ್ತಿಲ್ಲ ಎಂದು ಗಂಗಾಧರ್ ಸ್ಪಷ್ಟವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹದಿನೈದು ದಿನದ ಸಿಸಿಟಿವಿ ಪೂಟೇಜ್ ಒಯ್ದಿದ್ದಾರೆ ಎಂದು ಹೋಟೆಲ್ ಮಾಲೀಕ ಸಂದೇಶ್ ತಿಳಿಸಿದ್ದಾರೆ. ನಮಗೆ ಹೋಟೆಲ್ ಉದ್ಯಮವೇ ಮುಖ್ಯವಾಗಿದೆ. ಘಟನೆ ನಡೆದಾಗ ತಾವೇ ಬಂದು ಕಾರ್ಮಿಕರ ಬಳಿ ಕ್ಷಮೆ ಕೋರಿದ್ದೇನೆ. ಇದು ಇಂದ್ರಜಿತ್ ಲಂಕೇಶ್ ಮತ್ತು ನಟ ದರ್ಶನ್ ಅವರಿಗೆ ಸಂಬಂಧಪಟ್ಟ ವಿಷಯವಾಗಿದ್ದು, ಅವರೇ ಬಗೆಹರಿಸಿಕೊಳ್ಳಬೇಕೆಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.
Advertisement