ಬೆಂಗಳೂರು: ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ (ಎಸ್ ಸಿ) ವಿದ್ಯಾರ್ಥಿಗಳ ಆಧಾರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಅಂತಿಮ ಬೋರ್ಡ್ ಪರೀಕ್ಷೆಯ ನೋಂದಣಿ ಸಂಖ್ಯೆ ಬಳಸಿಕೊಂಡು ಉಚಿತ ಸ್ಕಾಲರ್ ಶಿಪ್ ಇ- ಕಾರ್ಡ್ ಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ವಿತರಿಸಲಿದೆ.
ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಾಲ್ಕರ್ ಶಿಪ್ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಆಡಳಿತ ಸುಧಾರಣಾ ಮತ್ತು ಸಿಬ್ಬಂದಿ ಇಲಾಖೆ ( ಇ-ಆಡಳಿತ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಗುರುವಾರ ತಿಳಿಸಿದರು.
ಅರ್ಹ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ನೀಡಲು ಮೊದಲ ಬಾರಿಗೆ ಕಾಗದ ರಹಿತ ವ್ಯವಸ್ಥೆ ಮಾಡಲಾಗುತ್ತಿದೆ. ವಿವರಗಳ ನಮೂದನೆ, ಪರಿಶೀಲನೆ, ಆಡ್ಮಿಷನ್, ಸ್ಕಾಲರ್ ಶಿಪ್ ವಿತರಣೆ, ವಿದ್ಯಾರ್ಥಿಗಳ ಪತ್ತೆ ಎಲ್ಲವೂ ಸ್ವಯಂ ಚಾಲಿತವಾಗಿರುತ್ತದೆ ಎಂದು ಹಿರಿಯ ಐಎಎಸ್ ಅಧಿಕಾರಿ ಹೇಳಿದರು.
ಕೇಂದ್ರ ಪ್ರಾಯೋಜಿತ ಮೆಟ್ರಿಕ್ ನಂತರದ ಸ್ಕಾಲರ್ ಶಿಪ್ ಯೋಜನೆಯನ್ನು ರಾಜ್ಯಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು ರಾಜ್ಯ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ (ಎಸ್ ಎಸ್ ಪಿ) ಲಾಗಿನ್ ಆಗಿ, ಮೂರು ಪ್ರಮಾಣಪತ್ರಗಳನ್ನು ಲಗತ್ತಿಸಬೇಕಾದ ಅಗತ್ಯವಿರುತ್ತದೆ.
ಈ ವಿವರಗಳನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುವುದು ಮತ್ತು ವಿದ್ಯಾರ್ಥಿಗಳು ಇದನ್ನು ಡೌನ್ ಲೋಡ್ ಮಾಡಿಕೊಂಡು, ಸರ್ಕಾರ ಶುಲ್ಕ ಪಾವತಿಯ ಖಾತರಿಯಂತೆ, ಆಡ್ಮಿಷನ್ ಗಾಗಿ ಕಾಲೇಜಿಗೆ ಇದನ್ನು ತೋರಿಸಬಹುದು. ರಾಜ್ಯ, ಸಿಬಿಎಸ್ ಇ ಮತ್ತು ಐಸಿಎಸ್ ಇ ಬೋರ್ಡ್, 65 ವಿಶ್ವವಿದ್ಯಾನಿಲಯಗಳೊಂದಿಗೆ ನಾವು ಸಂಪರ್ಕ ಹೊಂದಿರುವುದಾಗಿ ಚಾವ್ಲಾ ತಿಳಿಸಿದರು.
ಅನರ್ಹ ಅಭ್ಯರ್ಥಿಗಳು ಈ ಸವಲತ್ತು ಪಡೆಯದಂತೆ ನಿರ್ಬಂಧಿಸಲಾಗಿದೆ. ಈ ಸಾಲ್ಕರ್ ಶಿಪ್ ಪಡೆಯಲು ಶೇ.75 ರಷ್ಟು ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದೆ ಎಂದು ರಾಜೀವ್ ಚಾವ್ಲಾ ತಿಳಿಸಿದರು.
Advertisement