ರಾಜ್ಯದ ಅಂಗವಾಡಿಯಲ್ಲಿನ ಶೇ.10ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ಸಮೀಕ್ಷಾ ವರದಿ
ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಅಪೌಷ್ಟಿಕತೆಯಿಂದಾಗಿ ಹಲವು ಮಕ್ಕಳು ಸಾವಿನ ದವಡೆಯಲ್ಲಿ ಸಿಲುಕಿದ್ದಾರೆಂಬ ಆತಂಕಕಾರಿ ವಿಚಾರ ಸಮೀಕ್ಷಾ ವರದಿಯಿಂದ ಬಯಲಾಗಿದೆ.
Published: 18th July 2021 10:53 AM | Last Updated: 18th July 2021 11:12 AM | A+A A-

ಸಂಗ್ರಹ ಚಿತ್ರ
ಕಲಬುರಗಿ: ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಅಪೌಷ್ಟಿಕತೆಯಿಂದಾಗಿ ಹಲವು ಮಕ್ಕಳು ಸಾವಿನ ದವಡೆಯಲ್ಲಿ ಸಿಲುಕಿದ್ದಾರೆಂಬ ಆತಂಕಕಾರಿ ವಿಚಾರ ಸಮೀಕ್ಷಾ ವರದಿಯಿಂದ ಬಯಲಾಗಿದೆ.
ಕೋವಿಡ್ ಹಾಗೂ ಲಾಕ್ಡೌನ್ ಕಾರಣಕ್ಕೆ ಕಳೆದೊಂದು ವರ್ಷದಿಂದ ಅಂಗನವಾಡಿಗಳು ಬಂದ್ ಆಗಿವೆ. ಮತ್ತೊಂದೆಡೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೀಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆ ಕುಂಠಿತಗೊಂಡಿತ್ತು.
ಬಳಿಕ ಮೇ ತಿಂಗಳಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗವಾಡಿ ಕೇಂದ್ರಗಳಿಗೆ ಬರುವ ಹುಟ್ಟಿನಿಂದ 6 ವರ್ಷ ವಯೋಮಾನದವರೆಗಿನ 40,53,022 ಮಕ್ಕಳ ತೂಕ, ಬೆಳವಣಿಗೆ ಸಂಬಂಧ ಸಮೀಕ್ಷೆ ನಡೆಸಿದ್ದು, ಸಮೀಕ್ಷಾ ವರದಿಯಲ್ಲಿಯಲ್ಲಿ ಶೇ.10ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.
ಸಮೀಕ್ಷೆ ನಡೆಸಿದ 40,53,022 ಮಕ್ಕಳಲ್ಲಿ ಶೇಕಡಾ 10.50 ರಷ್ಟು ಮಕ್ಕಳು ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಶೇಕಡಾ 0.19 ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಶೇ.89.32ರಷ್ಟು ಮಕ್ಕಳು ಸಾಮಾನ್ಯವಾಗಿದ್ದು, ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿರುವ 4,25,369 ಮಕ್ಕಳಲ್ಲಿ 1,92,377 (ಶೇ. 45ರಷ್ಟು) ಮಕ್ಕಳು ಕಲ್ಯಾಣ ಕರ್ನಾಟಕ ಪ್ರದೇಶ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯವರಾಗಿದ್ದಾರೆ. ಇನ್ನು ತೀರಾ ಕಡಿಮೆ ತೂಕ ಇರುವ 7,627 ಮಕ್ಕಳಲ್ಲಿ 3,356 (ಶೇ.51) ಮಕ್ಕಳು ಈ ಭಾಗದವರೇ ಆಗಿದ್ದಾರೆಂದು ವರದಿಗಳು ತಿಳಿಸಿವೆ.
ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಹೊಂದಿರುವ ಮಕ್ಕಳಿದ್ದಾರೆಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ 57,444 ಮಧ್ಯಮ ಅಪೌಷ್ಟಿಕತೆ ಮತ್ತು 658 ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರ ನಂತರ ಸ್ಥಾನವನ್ನು ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳು ಪಡೆದುಕೊಂಡಿವೆ.
ಇನ್ನು ಕೊಡಗು ಜಿಲ್ಲೆಯಲ್ಲಿ 3,356 ಸಾಧಾರಣ ಅಪೌಷ್ಟಿಕತೆ (ಮಾಡರೇಟ್ ಅಕ್ಯೂಟ್ ಮಾಲ್ನ್ಯೂಟ್ರಿಷನ್– ಮ್ಯಾಮ್) ಹಾಗೂ 37 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ (ಸಿವಿಯರ್ ಅಕ್ಯೂಟ್ ಮಾಲ್ನ್ಯೂಟ್ರಿಷನ್–ಸ್ಯಾಮ್) ಬಳಲುತ್ತಿದ್ದಾರೆಂದು ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.