ದಸರಾ ವೇಳೆ ತಲಕಾಡಿನಲ್ಲಿ 'ಗಂಗೋತ್ಸವ' ಆಯೋಜನೆ: ಸಚಿವ ಯೋಗೇಶ್ವರ್ ಘೋಷಣೆ

ಇನ್ನುಮುಂದೆ ಪ್ರತಿ ವರ್ಷ ದಸರಾ ಹಬ್ಬದಲ್ಲಿ ತಲಕಾಡು ಗಂಗರ ಉತ್ಸವ ಆಯೋಜಿಸುತ್ತೇವೆ. ಇದರಿಂದ ತಲಕಾಡಿನ ಅಭಿವೃದ್ಧಿ ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ. 
ಯೋಗೇಶ್ವರ್
ಯೋಗೇಶ್ವರ್

ಮೈಸೂರು: ಇನ್ನುಮುಂದೆ ಪ್ರತಿ ವರ್ಷ ದಸರಾ ಹಬ್ಬದಲ್ಲಿ ತಲಕಾಡು ಗಂಗೋತ್ಸವ ಆಯೋಜಿಸುತ್ತೇವೆ. ಇದರಿಂದ ತಲಕಾಡಿನ ಅಭಿವೃದ್ಧಿ ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ. 

ತಲಕಾಡಿನಲ್ಲಿ ಮಾತನಾಡಿದ ಅವರು, ಈ ಸಂಬಂಧ ವಿವಿಧ ಇಲಾಖೆಗಳ ಜೊತೆ ಚರ್ಚೆ ಮಾಡಿ ರೂಪುರೇಷೆ ತಯಾರು ಮಾಡುತ್ತೇನೆ. ತಲಕಾಡು ಗಂಗೋತ್ಸವ ನಡೆಸಲು ತಲಕಾಡು ಅಭಿವೃದ್ಧಿ ಸಮಿತಿ ರಚಿಸುತ್ತೇವೆ. ತಲಕಾಡು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಇನ್ನೂ ಹೆಚ್ಚಿನ ಜನರಿಗೆ ಪರಿಚಯವಾಗಬೇಕಿದೆ. 

ಇಂತಹ ಸ್ಥಳದ ಅಭಿವೃದ್ಧಿ ಅವಶ್ಯಕತೆ ಇದೆ. ಆದರೆ ಮೂಲಭೂತ  ಸೌಕರ್ಯಗಳ ಕೊರತೆಯಿದೆ. ಈ ಕೊರತೆಯನ್ನು ಸರಿಪಡಿಸಲು ಉತ್ಸವಗಳ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಮೈಸೂರಿನಲ್ಲಿ ಹೆಲಿ ಟೂರಿಸಂ ಆದಷ್ಟು ಬೇಗ ಪ್ರಾರಂಭವಾಗಲಿದ್ದು, ಸದ್ಯದ ವಿರೋಧಗಳನ್ನು ಗಮನಿಸಿ ರೂಪುರೇಷೆಗಳನ್ನು ಬದಲಾವಣೆ ಮಾಡಿಕೊಂಡು ಯೋಜನೆಯನ್ನು ಪ್ರಾರಂಭಿಸುತ್ತೇವೆ. ಮೈಸೂರಿನಲ್ಲಿ ವಿಮಾನ ನಿಲ್ದಾಣ ಬಳಕೆ ಮಾಡಿಕೊಂಡು ಹೆಲಿ ಟೂರಿಸಂ ಅರಂಭಿಸಲಾಗುವುದು ಎಂದು ಸಚಿವ ಸಿ.ಪಿ.ಯೋಗೇಶ್ವರ್ ಮಾಹಿತಿ ನೀಡಿದರು.

‘ರೋಪ್‌ವೇ’ ಯೋಜನೆ ಅಂತಿಮದಲ್ಲಿದ್ದು, ನಂದಿಬೆಟ್ಟದಲ್ಲಿ ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ. 25 ಜಲಾಶಯಗಳಲ್ಲಿ ಜಲಕ್ರೀಡೆಗಳನ್ನು ಆಯೋಜಿಸುವುದಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮದ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಕೆಆರ್‌ಎಸ್ ಹಿನ್ನೀರಿನಲ್ಲಿ ಜಲ ಕ್ರೀಡೆಗಳನ್ನು ಪರಿಚಯಿಸಲು ನಾವು ಯೋಜಿಸಿದ್ದೇವೆ ಮತ್ತು ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಡಿಸ್ನಿ ಲ್ಯಾಂಡ್ ಪ್ರಾಜೆಕ್ಟ್  ಕೈಬಿಟ್ಟಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com