ಖಾಸಗಿ ಶಾಲೆಗಳ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಮೇಲೆ ಮುಸುಕುದಾರಿಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಬೆಂಗಳೂರು: ಭಯಾನಕ ಘಟನೆಯೊಂದರಲ್ಲಿ ಮೂವರು ಮುಸುಕುದಾರಿಗಳ ಗುಂಪೊಂದು ರಾಜ್ಯ ಖಾಸಗಿ ಶಾಲೆಗಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರಣ್ಯಪುರ ಬಳಿಯ ಮುತ್ಯಾಲನಗರದಲ್ಲಿ ಅವರ ಮನೆಯ ಎದುರುಗಡೆಯೇ ನಡೆದಿರುವ ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುರುವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಶಶಿಕುಮಾರ್ ಕಾರಿನಿಂದ ಇಳಿಯುತ್ತಿದ್ದಾಗ ಹಠಾತ್ತನೇ ಮಾರಕಾಸ್ತ್ರಗಳೊಂದಿಗೆ ಅವರ ಕಡೆಗೆ ಧಾವಿಸಿದ ಮೂವರ ಗುಂಪು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಶಶಿಕುಮಾರ್ ಕೂದಲೆಳೆ ಅಂತರದಲ್ಲಿ ಮಾರಕಾಸ್ತ್ರಗಳಿಂದ ತಪ್ಪಿಸಿಕೊಂಡು ಕಾರಿನೊಳಗೆ ಕುಳಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ತಕ್ಷಣ ಶಶಿಕುಮಾರ್ ಪರವಾನಗಿಯಿದ್ದ ಪಿಸ್ತೂಲ್ ನ್ನು ಹೊರಗೆ ತೆಗೆದಿದ್ದಾರೆ. ಇದನ್ನು ನೋಡಿದ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಹಿಂದೆ ಕೂಡಾ ತನ್ನಗೆ ಬೆದರಿಕೆ ಇದ್ದ ಕಾರಣ ಕೆಲವು ವರ್ಷಗಳಿಂದ ಪರವಾನಗಿ ಹೊಂದಿರುವ ಪಿಸ್ತೂಲ್ ಇಟ್ಟುಕೊಂಡಿದ್ದೇನೆ. ಕಾರಿನಿಂದ ಇಳಿದು ಅವರನ್ನು ಬೆನ್ನಟ್ಟಿದ್ದಾಗ ಅವರ ಕೈಯಲ್ಲಿ ಮಾರಕ ಆಯುಧಗಳು ಇದದ್ದು ಕಂಡುಬಂದಿತು. ತಲೆ ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿರುವುದಾಗಿ ಶಶಿಕುಮಾರ್ ತಿಳಿಸಿದರು.
ದಾಳಿಕೋರರ ಬಂಧನಕ್ಕಾಗಿ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ದಾಳಿ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.