ಆಗಸ್ಟ್ 1 ರಿಂದ ‘ನನ್ನ ಭಾರತ’ ರಾಷ್ಟ್ರಮಟ್ಟದ ಯುವ ಅಭಿಯಾನ

ದಿಶಾ ಭಾರತ್ ಸಂಸ್ಥೆಯು ದೇಶದ 75ನೇ ಸ್ವಾತಂತ್ರ್ಯೋತ್ಸವ ವರ್ಷದ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ 15 ರವರೆಗೆ 15 ದಿನಗಳ ರಾಷ್ಟ್ರಮಟ್ಟದ ನಮ್ಮ ಭಾರತ (MyBharat) ಎಂಬ ಆನ್ ಲೈನ್ ಯುವ ಅಭಿಯಾನವನ್ನು ಆಯೋಜಿಸಿದೆ. 
‘ನನ್ನ ಭಾರತ’ ರಾಷ್ಟ್ರಮಟ್ಟದ ಯುವ ಅಭಿಯಾನ
‘ನನ್ನ ಭಾರತ’ ರಾಷ್ಟ್ರಮಟ್ಟದ ಯುವ ಅಭಿಯಾನ

ಬೆಂಗಳೂರು: ದಿಶಾ ಭಾರತ್ ಸಂಸ್ಥೆಯು ದೇಶದ 75ನೇ ಸ್ವಾತಂತ್ರ್ಯೋತ್ಸವ ವರ್ಷದ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ 15 ರವರೆಗೆ 15 ದಿನಗಳ ರಾಷ್ಟ್ರಮಟ್ಟದ ನಮ್ಮ ಭಾರತ (MyBharat) ಎಂಬ ಆನ್ ಲೈನ್ ಯುವ ಅಭಿಯಾನವನ್ನು ಆಯೋಜಿಸಿದೆ. 

ಈ ಅಭಿಯಾನದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಆನ್‌ಲೈನ್ ಮೂಲಕ ನಡೆಯಲಿದ್ದು ದಿಶಾ ಭಾರತ್ ಫೇಸ್‌ಬುಕ್ (www.facebook.com/DishaBharat) ಮೂಲಕ ನೇರ ಪ್ರಸಾರವಾಗಲಿದೆ. 

ಪ್ರತಿನಿತ್ಯ ಬೆಳಗ್ಗೆ 11 ರಿಂದ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ಏಕಪಾತ್ರಾಭಿನಯ, ರಾಷ್ಟ್ರಭಾವಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆಗಳು ಮೂಡಿಬರಲಿವೆ.

ಪ್ರತಿನಿತ್ಯ ಸಂಜೆ 6 ಕ್ಕೆ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗಣ್ಯ ವಿಷಯತಜ್ಞರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ, ಭವಿಷ್ಯದ ಭಾರತ, ಇತ್ಯಾದಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಅಗಸ್ಟ್ 1, 2021 ರಂದು ಸಂಜೆ 6ಕ್ಕೆ ಉಪನ್ಯಾಸ ಸರಣಿಯ ಉದ್ಘಾಟನಾ ಭಾಷಣವನ್ನು ನವದೆಹಲಿಯ ಡಾ. ಅನಿರ್ಬನ್ ಗಂಗೂಲಿ ಮಾಡಲಿದ್ದಾರೆ. ಅಗಸ್ಟ್ 15 ರಂದು ಸಂಜೆ 6ಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಮಾರೋಪ ಭಾಷಣ ಮಾಡಲಿದ್ದಾರೆ.

75 ಸ್ವಾತ್ರಂತ್ಯೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸ್ವರಾಜ್ಯ-75 ಸ್ವಾತಂತ್ರ್ಯ ನಂತರದ ಭಾರತ (“Swarajya – 75 – Bharat after Independence”) ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಈಸ್ಟ್ ವೆಸ್ಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಏರ್ಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು (ವಿಭಾಗ-೧) ಹಾಗೂ ಕಾಲೇಜು ವಿದ್ಯಾರ್ಥಿಗಳು (ವಿಭಾಗ-೨) ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ವಹಸ್ತಾಕ್ಷರದಲ್ಲಿ 2500 ಶಬ್ದಮಿತಿಯಲ್ಲಿ ಬರೆದ ಪ್ರಬಂಧವನ್ನು ಅಗಸ್ಟ್ 15, 2021ರ ಒಳಗೆ ಈ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ. 

ವಿಳಾಸ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಈಸ್ಟ್ ವೆಸ್ಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಂ. 63, ಬಿ.ಇ.ಎಲ್ ಲೇಔಟ್ ಬಳಿ, ವಿಶ್ವನೀಡಂ ಪೋಸ್ಟ್, ಅಂಜನಾನಗರ, ಬೆಂಗಳೂರು – 560091, ದೂರವಾಣಿ: 9483150527, 8861938180, 9141372839

ಕ್ರಾಂತಿಕಾರಿ ಭಗತ್‌ಸಿಂಗ್ ಕುರಿತ ಕಿರುನಾಟಕ ಪ್ರದರ್ಶನವೊಂದನ್ನು ಆಯೋಜಿಸಲಾಗಿದ್ದು ಅಗಸ್ಟ್ 14, 2021ರ ರಾತ್ರಿ 7.30ಕ್ಕೆ ದಿಶಾಭಾರತ್ ಫೇಸ್‌ಬುಕ್ ಪೇಜ್ ಮೂಲಕ ನೇರಪ್ರಸಾರವಾಗಲಿದೆ.

ಅಗಸ್ಟ್ 15, 2021 ರಂದು ಬೆಳಗ್ಗೆ 7.30ಕ್ಕೆ ಜಯನಗರ 4ನೇ ಬ್ಲಾಕ್‌ನ ಶಾಲಿನಿ ಗ್ರೌಂಡ್ಸ್ ಪರಿಸರದಿಂದ ‘ಸ್ವರಾಜ್ಯ-75’ ಆಶಯದೊಂದಿಗೆ ಯುವಜನತೆಯ ವಾಕಥಾನ್ ಕಾಲ್ನಡಿಗೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಗಸ್ಟ್ 1, 8, 15 ರ ಭಾನುವಾರಗಳಂದು ಮಧ್ಯಾಹ್ನ 3.00ಕ್ಕೆ ಭಾರತದ ಪ್ರಾಚೀನ ವೈಭವ, ವರ್ತಮಾನದ ತಲ್ಲಣಗಳು ಹಾಗೂ ಭವಿಷ್ಯದ ಭಾರತ ಎಂಬ ಮೂರು ವಿಷಯಗಳ ಕುರಿತು ಯುವಚಿಂತಕರಿಂದ ಸಂವಾದ ಕಾರ್ಯಕ್ರಮಗಳು ಮೂಡಿಬರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com