ಕೋವಿಡ್ ರೋಗಿಗಳ ಚಿಕಿತ್ಸೆಗೆ 'ಐವರ್ಮೆಕ್ಟಿನ್' ಬಳಸಲು ಕೇಂದ್ರ ಆರೋಗ್ಯ ಸಚಿವರಿಗೆ ಕೊಡಗು ಡಾಕ್ಟರ್ ಪತ್ರ!

ಕೋವಿಡ್ ರೋಗಿಗಳ ಚಿಕಿತ್ಸೆಗೆ ಸುರಕ್ಷಿತ ಮತ್ತು ಕಡಿಮೆ ದರವಿರುವ ಐವರ್ಮೆಕ್ಟಿನ್ ಔಷಧ ಬಳಕೆಯ ಸಲಹೆ ನೀಡಿ ಕೊಡಗಿನ ನಿವೃತ್ತ ಸರ್ಜನ್ ಒಬ್ಬರು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಸುರಕ್ಷಿತ ಮತ್ತು ಕಡಿಮೆ ದರವಿರುವ ಐವರ್ಮೆಕ್ಟಿನ್ ಔಷಧ ಬಳಕೆಯ ಸಲಹೆ ನೀಡಿ ಕೊಡಗಿನ ನಿವೃತ್ತ ಸರ್ಜನ್ ಒಬ್ಬರು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.

ಇಂಗ್ಲೆಂಡ್ ನಲ್ಲಿ ಸರ್ಜಿಕಲ್ ತರಬೇತಿ ಪೂರ್ಣಗೊಳಿಸಿರುವ ನಿವೃತ್ತ ವೈದ್ಯೆ ಡಾ. ಕಾವೇರಿ ನಂಬಿಸನ್ ಪ್ರಸ್ತುತ ಕೊಡಗಿನ ಪೊನ್ನಂಪೇಟೆಯಲ್ಲಿ ಖಾಸಗಿ ಕ್ಲಿನಿಕ್ ವೊಂದನ್ನು ನಡೆಸುತ್ತಿದ್ದಾರೆ. ಇದೀಗ ಇವರು  ಕೋವಿಡ್ ರೋಗಿಗಳಿಗೆ ಆರಂಭಿಕ ಚಿಕಿತ್ಸೆಗಾಗಿ ಐವರ್ಮೆಕ್ಟಿನ್ ಔಷಧ ಬಳಕೆಗೆ ಅನುಮೋದನೆ ಕೋರಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದಾರೆ.

ಡಿ-ವರ್ಮಿಂಗ್ ಟ್ಯಾಬ್ಲೆಟ್ ಆಗಿ ಕೆಲವು ವರ್ಷಗಳಿಂದ ದೇಶದಲ್ಲಿ ಐವರ್ಮೆಕ್ಟಿನ್ ಔಷಧವನ್ನು ಹೆಚ್ಚಾಗಿ ಬಳಸಲಾಗಿತ್ತು. ಇದೀಗ ಇದು 
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಆಸ್ಟ್ರೇಲಿಯಾದ ವಿಜ್ಞಾನಿಯೊಬ್ಬರು ಕಳೆದ ವರ್ಷ ನಡೆಸಿದ ವಿಟ್ರೋ ಅಧ್ಯಯನ ನಡೆಸಿದ್ದರು. ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಐವರ್ಮೆಕ್ಟಿನ್ ಹೇಗೆ ಪರಿಣಾಮಕಾರಿ ಎಂಬುದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಬಾಂಗ್ಲಾದೇಶದ ವೈದ್ಯರೊಬ್ಬರು ಇದನ್ನು ಅನುಸರಿಸಿದಾಗ ಪರಿಣಾಮಕಾರಿ ಅನ್ನೋದು ಸಾಬೀತಾಗಿದೆ. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಮೂಲದ ವೈದ್ಯ ಡಾ. ಶಂಕರ ಚೆಟ್ಟಿ, ಐವರ್ಮೆಕ್ಟಿನ್ ಔಷಧದೊಂದಿಗೆ ಸುಮಾರು 4000 ಕೋವಿಡ್ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ ಎಂದು ಡಾ. ಕಾವೇರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ಔಷಧ ಐಸಿಎಂಆರ್ ಮತ್ತು ದೆಹಲಿಯ ಏಮ್ಸ್ ನಿಂದ ಅನುಮೋದನೆ ಪಡೆದುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಒಡಿಶಾ, ಗೋವಾ, ಮಧ್ಯಪ್ರದೇಶದಲ್ಲೂ ಕೋವಿಡ್ ರೋಗಿಗಳಿಗೆ ಆರಂಭಿಕ ಚಿಕಿತ್ಸೆಗಾಗಿ ಐವರ್ಮೆಕ್ಟಿನ್ ಬಳಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ನಿಂದಲೂ ಕೊಡಗಿನ ಗ್ರಾಮೀಣ ಪ್ರದೇಶದ ಕೋವಿಡ್ ರೋಗಿಗಳಿಗೆ ಐವರ್ಮೆಕ್ಟಿನ್ ನೊಂದಿಗೆ
ಚಿಕಿತ್ಸೆ ನೀಡುತ್ತಿದ್ದೇನೆ.ಪಾಸಿಟಿವ್ ರೋಗಿಗಳು ತಮ್ಮ ಹತ್ತಿರ ಬಂದಾಗ, ಸೋಂಕು ಹರಡದಂತೆ ಆ ರೋಗಿಯ ಇಡೀ ಕುಟುಂಬಕ್ಕೆ
ಐವರ್ಮೆಕ್ಟಿನ್ ಮಾತ್ರೆ ಬಳಸುವಂತೆ ಸೂಚನೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ

ಕೋವಿಡ್-19 ಆರಂಭಿಕ ಹಂತದಲ್ಲಿ ಐವರ್ಮೆಕ್ಟಿನ್ ಮಾತ್ರೆ ಬಳಕೆ ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಆಗಲ್ಲ. ಪ್ರಸ್ತುತ ಇದು ಯಾವುದೇ ಆಂಟಿಬಯೋಟಿಕ್ ಗಿಂತಲೂ ಉತ್ತಮ ಹಾಗೂ ಕಡಿಮೆ ದರದ್ದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಬರೆದಿರುವ ಪತ್ರದಲ್ಲಿ ಡಾ. ಕಾವೇರಿ ತಿಳಿಸಿದ್ದಾರೆ.  

ಕೋವಿಡ್ ಆರಂಭಿಕ ಹಂತದಲ್ಲಿ ಕಡ್ಡಾಯವಾಗಿ ಐವರ್ಮೆಕ್ಟಿನ್ ಬಳಕೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವರಲ್ಲಿ ಡಾ. ಕಾವೇರಿ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com