ಜೂನ್ 14 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ನಿಯಮ ವಿಸ್ತರಣೆ; 500 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ: ಸಿಎಂ

ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಈಗ ಇರುವ ನಿಯಮಗಳು ಜೂನ್ 14 ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಈಗ ಇರುವ ನಿಯಮಗಳು ಜೂನ್ 14 ರ ಬೆಳಿಗ್ಗೆ 6 ವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಲಾಕ್ ಡೌನ್ ವಿಸ್ತರಣೆ ಬಗ್ಗೆ ಜೂನ್ 03 ರಂದು ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೋನಾ ನಿಯಂತ್ರಣಕ್ಕಾಗಿ ವಿಧಿಸಲಾಗಿಸಲಾಗಿರುವ ನಿಯಮಗಳಲ್ಲಿ ಸದ್ಯಕ್ಕೆ ಯಾವುದೇ ಸಡಿಲಿಕೆ, ಬದಲಾವಣೆಗಳೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಹೊಟೆಲ್ ಗಳಿಂದ ಪಾರ್ಸಲ್ ಪಡೆಯುವುದಕ್ಕೆ, ರಫ್ತು ಮಾಡುವುದಕ್ಕೆ ಅಗತ್ಯವಿರುವ ಚಟುವಟಿಕೆಗಳಿಗೆ ನಿರ್ಬಂಧವನ್ನು ಸಡಿಲಿಸಲಾಗಿದೆ .

ಒಟ್ಟು 500 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ 

ಕರ್ನಾಟಕದಲ್ಲಿ 2ನೇ ಅಲೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಈಗಾಗಲೇ ಪರಿಹಾರದ ಪ್ಯಾಕೇಜ್‍ನ್ನು ಘೋಷಣೆ ಮಾಡುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದಲ್ಲದೇ ಕಠಿಣ ನಿರ್ಬಂಧಗಳ ಜಾರಿಯಿಂದ ತೊಂದರೆಗೀಡಾಗಿರುವ ಬೇರೆ ಬೇರೆ ವರ್ಗದವರಿಂದಲೂ ಕೂಡ ಹಲವಾರು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತನದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಘೋಷಣೆ ಮಾಡಲಾಗಿರುವ ಪರಿಹಾರ ಪ್ಯಾಕೇಜ್ ನ ವಿವರ ಹೀಗಿದೆ..

  1. ಪವರ್ ಲೂಮ್ ನೇಕಾರರು: ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್‍ಗಳಿಗೆ 35 ಕೋಟಿ ವೆಚ್ಚ.
  2. ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದಲ್ಲಿನ ಅಸಂಘಟಿತ ಕಾರ್ಮಿಕರು: ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು ರೂ 6.6 ಕೋಟಿ ವೆಚ್ಚ.
  3. ಮೀನುಗಾರರಿಗೆ ಪರಿಹಾರ: ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ ರೂ 3000 ಗಳ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 5.6 ಕೋಟಿ ವೆಚ್ಚವಾಗಲಿದೆ. ಇದಲ್ಲದೆ ಒಟ್ಟು 7,668 ಇನ್‍ಲ್ಯಾಂಡ್ ದೋಣಿ ಮಾಲಿಕರಿಗೆ ತಲಾ ರೂ 3,000ರಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 2.3 ಕೋಟಿ ವೆಚ್ಚವಾಗಲಿದೆ. ಇದಲ್ಲದೆ ಮೀನುಗಾರರ ಸಂಘಗಗಳಿಂದ ಒಳನಾಡು ಮೀನುಗಾರಿಗೆಕೆ ಸರ್ಕಾರಕ್ಕೆ ನೀಡಬೇಕಾಗಿರುವ ಕಾಂಟ್ರಾಕ್ಟ್ ಫೀಸ್‍ನಲ್ಲಿ ಶೇ.25 ರೀಯಾಯಿತಿ
  4. ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳು: ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡಿಗೆ ಕೆಲಸಗಾರರು ಮತ್ತು ಸಿಬ್ಬಂದಿಗಳಿಗೆ ತಲಾ ರೂ 3,000 ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು ಇದರಿಂದ ರೂ 10.8 ಕೋಟಿ ವೆಚ್ಚವಾಗಲಿದೆ.
  5. ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಪೇಶ್ ಇಮಾಮ್ ಮತ್ತು ಫೌಜಿಂ ಗಳಿಗೆ ತಲಾ 3,000 ರೂ. ನೆರವು.
  6. ಆಶಾ ಕಾರ್ಯಕರ್ತೆಯರು: ಆಶಾ ಕಾರ್ಯಕರ್ತೆಯರು ಕೋವಿಡ್-19ನ ಸೋಂಕನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ವರ್ಗದವರಿಗೆ ಸಹಾಯ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಸರ್ಕಾರವು ಕೋವಿಡ್-19 ತಡೆಗಟ್ಟುವಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ತಲಾ ರೂ 3,000 ಗಳ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಒಟ್ಟು 42,574 ಆಶಾ ಕಾರ್ಯಕರ್ತರಿಗೆ ಸಹಾಯವಾಗಲಿದ್ದು ಅಂದಾಜು ರೂ 12.75 ಕೋಟಿ ವೆಚ್ಚವಾಗಲಿದೆ.
  7. ಅಂಗನವಾಡಿ ಕಾರ್ಯಕರ್ತೆಯರು: 64,423 ಅಂಗನವಾಡಿಯ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ ರೂ 2,000 ಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 24.7 ಕೋಟಿ ವೆಚ್ಚವಾಗಲಿದೆ.
  8. ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡುವ ಬಗ್ಗೆ:  ಈ ಸಮಯದಲ್ಲಿ ಹಾಲಿನ ಬೇಡಿಕೆ ಕಡಿಮೆಯಾಗಿದ್ದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡ ರೈತರಿಗೆ ಸಮಸ್ಯೆಯಾಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಎಲ್ಲಾ ಶಾಲೆಗಳು ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ  ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದ್ದು ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 100 ಕೋಟಿ ವೆಚ್ಚವಾಗಲಿದೆ.
  9. ಅನುದಾನ ರಹಿತ ಶಾಲೆಗಳ ಶಿಕ್ಷಕರು: ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.
  10. ನ್ಯಾಯವಾದಿಗಳಿಗೆ ಪರಿಹಾರ: ನ್ಯಾಯವಾದಿಗಳ ಕಲ್ಯಾಣ ನಿಧಿಗೆ ರೂ 5 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು.
  11. ಕೈಗಾರಿಕೆಗಳಿಗೆ ಪರಿಹಾರ: "MSME ಕೈಗಾರಿಕೆಗಳಿಗೆ ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕಗಳನ್ನು (Fixed charges) ಪಾವತಿಸುವುದರಿಂದ ವಿನಾಯಿತಿಯನ್ನು ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 114.70 ಕೋಟಿ ಹೆರೆಯಾಗುತ್ತದೆಂದು ಅಂದಾಜಿಸಿದೆ. MSME ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕ ಪಾವತಿಸುವುದನ್ನು ದಿನಾಂಕ:30-7-2021 ರವರೆಗೆ ಮುಂದೂಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 5.56 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ. ಈ ಎರಡು ಕ್ರಮಗಳಿಂದ ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ" ಎಂದು ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com