ಬೆಂಗಳೂರು: ಕೋವಿಡ್-19 ಸೋಂಕಿಗೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ 24 ಮಕ್ಕಳು ಇದುವರೆಗೆ ಇದ್ದಾರೆ ಎಂದು ಮಕ್ಕಳ ಅಭಿವೃದ್ಧಿ ಸಮಿತಿ ಮಾಹಿತಿ ನೀಡಿದೆ.
ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ 4 ಮಕ್ಕಳಿದ್ದು, ಮೇ 31ಕ್ಕೆ ಅನಾಥ ಮಕ್ಕಳ ಸಂಖ್ಯೆ 18 ಇದ್ದಿದ್ದು, ಮೊನ್ನೆ ಜೂನ್ 3ರ ಹೊತ್ತಿಗೆ 24ಕ್ಕೆ ಏರಿದೆ.
ರಾಯಚೂರಿನಲ್ಲಿ ನಾಲ್ವರು, ಬಾಗಲಕೋಟೆಯಲ್ಲಿ 3, ಬೆಂಗಳೂರು ನಗರ, ಮೈಸೂರು, ಬೀದರ್, ಬೆಳಗಾವಿ ಮತ್ತು ಗದಗ ಜಿಲ್ಲೆಯಲ್ಲಿ ತಲಾ ಇಬ್ಬರು ಮಕ್ಕಳು, ಕೋಲಾರ, ಕೊಡಗು, ಚಾಮರಾಜನಗರ, ದಾವಣಗೆರೆ, ಮಂಡ್ಯ, ಚಿಕ್ಕಮಗಳೂರು ಮತ್ತು ರಾಮನಗರಗಳಲ್ಲಿ ತಲಾ ಒಬ್ಬೊಬ್ಬ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
24 ಮಕ್ಕಳಲ್ಲಿ 12 ಮಕ್ಕಳು ಒಡಹುಟ್ಟಿದವರಾಗಿದ್ದಾರೆ. ಅವರನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಮಕ್ಕಳ ಅಭಿವೃದ್ಧಿ ಸಮಿತಿಗಳು ಇದನ್ನು ನೋಡಿಕೊಳ್ಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಮೊನ್ನೆ ಬುಧವಾರ ಅನಾಥರಾದ ಮಕ್ಕಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ನೋಡಿಕೊಳ್ಳುವವರಿಗೆ ಮತ್ತು ಮಕ್ಕಳಿಗೆ ಸಂಪೂರ್ಣ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಕೋವಿಡ್ ನಿಂದ ಮೃತಪಟ್ಟ ಪೋಷಕರ ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರ ಬಾಲ ಸೇವೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಮೂಲಕ ಮಕ್ಕಳ ಉಸ್ತುವಾರಿ ವಹಿಸಲಾಗುವುದು ಎಂದು ಸಚಿವೆ ಹೇಳಿದ್ದಾರೆ.
Advertisement