ಬೆಳಗಾವಿ: ಮಾಹಾಮಾರಿ ಕೊರೊನಾದಿಂದ ಪ್ರತಿನಿತ್ಯ ಮೃತ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಬೆಳಗಾವಿಯ ಶ್ರೀರಾಮ ಸೇನಾ ಹಿಂದೂಸ್ತಾನ್ ಸದಸ್ಯರು ಮೃತರ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಕೊರೋನಾ ಸೋಂಕಿಗೆ ಹೆದರುತ್ತಿರುವ ಜನರು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮುಂದೆ ಬರುತ್ತಿಲ್ಲ. ಒಡಹುಟ್ಟಿದವರು, ಕುಟುಂಬ ಸದಸ್ಯರು, ಆಪ್ತ ಸ್ನೇಹಿತರೂ ಕೂಡ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿ, ಅಂತ್ಯಸಂಸ್ಕಾರದ ಜವಾಬ್ದಾರಿಯನ್ನು ಸರ್ಕಾರ, ಸಮಾಜಸೇವಾ ಸಂಘಟನೆಗಳ ಮೇಲೆ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಯುವಕರ ಸದಸ್ಯರನ್ನು ಹೊಂದಿರುವ ಶ್ರೀ ರಾಮಾ ಸೇನಾ ಹಿಂದೂಸ್ತಾನ್ ಎಂಬ ಸಂಘಟನೆ ಕೋವಿಡ್ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದ್ದು, 2020ರ ಏಪ್ರಿಲ್ ತಿಂಗಳಿನಿಂದಲೂ ಸೇವೆ ಸಲ್ಲಿಸುತ್ತಿದೆ. ಜಾತಿ, ಧರ್ಮ ಎಂಬ ಯಾವುದೇ ಭೇದಭಾವವಿಲ್ಲದೆ ಈ ವರೆಗೂ ಸದಸ್ಯರು 178 ಮಂದಿ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಶಂಕರ್ ಪಾಟೀಲ್ ಎಂಬುವವರ ನೇತೃತ್ವದಲ್ಲಿ ಒಟ್ಟು 10 ಮಂದಿಯ ಸದಸ್ಯರ ತಂಡ ಈ ಸೇವೆಯನ್ನು ಮಾಡುತ್ತಿದೆ. ತಂಡದಲ್ಲಿ ಸಚಿನ್ ಪಾಟೀಲ್, ಸುದೇಶ್, ಪಾಪು ಶಿಂಧೆ, ಪ್ರೀತೇಶ್ ಮಲ್ಕಾಚೆ, ಪ್ರಜ್ವಲ್ ಕಿಟ್ವಾಡ್ಕರ್, ವಿಟ್ಟಲ್ ಕೋಕಿಟ್ಕರ್, ನಾಗೇಶ್ ರೆಡ್ಕರ್, ದೌಲತ್ ಕಾನ್ಬಾರ್ಕರ್ ಮತ್ತು ವಿನಾಯಕ್ ಪೂಜಾರಿ ಎಂಬುವವರು ಸೇವೆ ಮಾಡುತ್ತಿದ್ದಾರೆ.
ದಿನದ 24*7 ವರೆಗೂ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ದೂರವಾಣಿ ಕರೆ ಬಂದ ಕೂಡಲೇ ಪಿಪಿಇ ಕಿಟ್, ಫೇಸ್ ಮಾಸ್ಕ್, ಶೀಲ್ಡ್ ಗಳು ಹಾಗೂ ಗ್ಲೌಸ್ ಹಾಕಿಕೊಂಡು ಸೇವೆ ಮಾಡಲು ಈ ತಂಡ ಮುಂದಾಗುತ್ತಿದೆ.
ಕೇವಲ ಅಂತ್ಯಸಂಸ್ಕಾರ ನೆರವೇರಿಸುವುದಷ್ಟೇ ಅಲ್ಲದೆ, ಸಂಕಷ್ಟದಲ್ಲಿರುವರಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದಾರೆ. ನಾಲ್ಕು ಮಂದಿ ವೈದ್ಯರೊಂದಿಗೆ ಸ್ವಲ್ಪ ಲಕ್ಷಣ ಇರುವ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಈ ತಂಡ ಮಾಡುತ್ತಿದೆ.
Advertisement