ಬೆಂಗಳೂರು: ನಗರದ ಫುಟ್ಪಾತ್ಗಳ ಮೇಲಿರುವ ವಿದ್ಯುತ್ ಪರಿವರ್ತಕಗಳಿಂದ (ಟ್ರಾನ್ಸ್ಫಾರ್ಮರ್) ಉಂಟಾಗುವ ಅಪಾಯ ಕುರಿತು ಅಧ್ಯಯನ ನಡೆಸಲು ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ.
ನಗರದ ಫುಟ್ಪಾತ್ಗಳ ಮೇಲಿರುವ ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್ಫಾರ್ಮರ್) ತೆರವುಗೊಳಿಸಬೇಕು ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಸಂಬಂಧ ಹೈಕೋರ್ಟ್ಗೆ ಬೆಸ್ಕಾಂ ಪರ ವಕೀಲರು ಮಾಹಿತಿ ನೀಡಿದ್ದು, ನಗರದ ಫುಟ್ಪಾತ್ಗಳ ಮೇಲಿರುವ ವಿದ್ಯುತ್ ಪರಿವರ್ತಕಗಳಿಂದ (ಟ್ರಾನ್ಸ್ಫಾರ್ಮರ್) ಜನರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಪರಾಮರ್ಶಿಸಲು ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಫುಟ್ಪಾತ್ಗಳಲ್ಲಿನ ಟ್ರಾನ್ಸ್ಫಾರ್ಮರ್ಗಳು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದೆಯೆ? ಇಲ್ಲವೇ ಎಂದು ಪರಿಶೀಲಿಸಲಿದೆ. ಈಗಾಗಲೇ ಈ ಸಮಿತಿ ಒಂದು ಸಭೆ ನಡೆಸಿದೆ. 2ನೇ ಸಭೆ ಜೂನ್ 24ಕ್ಕೆ ನಿಗದಿಯಾಗಿದೆ ಎಂದು ಹೇಳಿದರು.
ಈ ಹಿಂದೆ, ಅಂದರೆ ಮಾರ್ಚ್ ತಿಂಗಳಲ್ಲಿ ಟ್ರಾನ್ಸ್ಫಾರ್ಮರ್ಗಳಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಟ್ರಾನ್ಸ್ಫಾರ್ಮರ್ ಅಳವಡಿಸುವ ಮೊದಲು ನೆಲ ಅಗೆಯಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಲೈಸೆನ್ಸ್ ಪಡೆದುಕೊಳ್ಳಬೇಕು ಎಂದು ಹೇಳಿತ್ತು. ಎಲೆಕ್ಟ್ರಿಸಿಟ್ ಆ್ಯಕ್ಟ್ (2003) ಅನ್ವಯ ಬೆಸ್ಕಾಂ ಇಂಥ ಅನುಮತಿ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರತಿ ಬಾರಿ ನೆಲ ಅಗೆಯುವ ಮೊದಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಲೇಬೇಕು ಎಂದು ಹೇಳಿತ್ತು. ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ರಸ್ತೆಗಳಲ್ಲಿ ಹೇಗಂದರೆ ಹಾಗೆ ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಜನರ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂದು ಅತ್ರಿ ದೂರಿದ್ದರು.
ಇದನ್ನು ನಿರಾಕರಿಸಿದ್ದ ಬೆಸ್ಕಾಂ, ಟ್ರಾನ್ಸ್ಫಾರ್ಮರ್ ಅಳವಡಿಕೆ ವೇಳೆ ಎಲ್ಲ ನಿಯಮಗಳನ್ನೂ ಪಾಲಿಸಲಾಗುತ್ತಿದೆ. ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ಗಳೂ ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸುರಕ್ಷೆಯನ್ನು ಖಾತ್ರಿಪಡಿಸುತ್ತಿದ್ದಾರೆ ಎಂದು ಹೇಳಿತ್ತು.
Advertisement