ಕೋವಿಡ್ 3ನೇ ಅಲೆ ಎದುರಿಸಲು ಕ್ರಮ: ಮಕ್ಕಳ ರಕ್ಷಣೆ ಕುರಿತು ಎಲ್ಲಾ ವೈದ್ಯರಿಗೆ ತರಬೇತಿ- ಆರ್.ಅಶೋಕ್

ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಲು ಬಿಬಿಎಂಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ.
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಲು ಬಿಬಿಎಂಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ.

ಕೋವಿಡ್ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೋವಿಡ್-19 ಸೋಂಕು ನಿರ್ವಹಣೆಯ ಕುರಿತು ಬಿ ಬಿ ಎಂ ಪಿ ವೈದ್ಯರಿಗೆ ಮತ್ತು ಮಕ್ಕಳ ತಜ್ಞರಿಗೆ ರಾಜ್ಯದ ಮೊಟ್ಟ ಮೊದಲ ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಾಗಾರಕ್ಕೆ ನಿಮ್ಹಾನ್ಸ್ ನಲ್ಲಿ ಚಾಲನೆ ನೀಡಲಾಯಿತು

ನಗರದಲ್ಲಿ ಮಕ್ಕಳ ತಜ್ಞರ ಕೊರತೆ ಇರುವುದರಿಂದ ಇತರ ವೈದ್ಯರನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಕೋವಿಡ್‌ ಪೀಡಿತ ಮಕ್ಕಳ ಆರೈಕೆಗೆ ಹೇಗೆ ಸಜ್ಜಾಗಬೇಕು ಎಂಬ ಕುರಿತು ವೈದ್ಯರಿಗೆ ಬಿಬಿಎಂಪಿ ವತಿಯಿಂದ  ವಿಶೇಷ ತರಬೇತಿ ಏರ್ಪಡಿಸಲಾಯಿತು. ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ಆರ್ .ಅಶೋಕ್ ಮಕ್ಕಳ ಚಿಕಿತ್ಸೆ ಒಂದು ಸವಾಲು. ದೊಡ್ಡವರಿಗೆ ಚಿಕಿತ್ಸೆ ನೀಡಿದಂತೆ ಮಕ್ಕಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಸಮಾಧಾನ ಚಿತ್ತದಿಂದ ನಡೆದುಕೊಳ್ಳಬೇಕು. ತಾಯಿ
ಹೃದಯದಿಂದ ಅವರ ಮನಸ್ಸನ್ನು ಒಲಿಸಿಕೊಂಡು ಚಿಕಿತ್ಸೆ ನೀಡುವುದು ಕೂಡಾ ಸವಾಲಿನ ವಿಷಯ’ ಎಂದರು.

ನಗರದಲ್ಲಿ 25 ಲಕ್ಷ ಮಕ್ಕಳಿದ್ದಾರೆ. ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್‌ ಮೂರನೇ ಅಲೆಯಲ್ಲಿ ಏನು ತಯಾರಿ ನಡೆಸಬೇಕು ಎಂದು ಯೋಜನೆ ರೂಪಿಸಿದ್ದೇವೆ. ನಗರದಲ್ಲಿ ಮಕ್ಕಳ ತಜ್ಞರ ಸಂಖ್ಯೆ ತುಂಬಾ ಕಡಿಮೆ ಇದೆ. ಬೇರೆ ಬೇರೆ ವೈದ್ಯರನ್ನು ಹಾಗೂ ಇತರ ರೋಗತಜ್ಞರನ್ನು ಬಳಸಿಕೊಂಡು ಮಕ್ಕಳ ಚಿಕಿತ್ಸೆಗೆ ಕೊರತೆ ಆಗದಂತೆ ಕ್ರಮವಹಿಸಿದ್ದೇವೆ. ಬಿಬಿಎಂಪಿ ವೈದ್ಯರ ಜೊತೆ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ಎರಡು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಐದು ವರ್ಷದ ಒಳಗಿನ ಮಕ್ಕಳು ತಾಯಿಯನ್ನು ಬಿಟ್ಟು ಇರಲು ಸಾಧ್ಯವಿಲ್ಲ. ತಾಯಿಗೆ ಕೋವಿಡ್‌ ಹರಡದಂತೆ ಏನು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಚಿಕಿತ್ಸೆ ಸಂದರ್ಭದಲ್ಲಿ ಮಕ್ಕಳನ್ನು ದಾಖಲು ಮಾಡಿದ ವಾರ್ಡ್‌ನಲ್ಲೇ ಅವರ ತಂದೆ ಅಥವಾ ತಾಯಿಯೂ ಉಳಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಸೌಕರ್ಯ ಒದಗಿಸುವ ಸವಾಲೂ ನಮ್ಮ ಮುಂದಿದೆ’ ಎಂದರು. ‘ವಯಸ್ಕರಿಗೆ ನೀಡುವ ಔಷಧಗಳೇ ಬೇರೆ. ಮಕ್ಕಳಿಗೆ ನೀಡುವ ಔಷಧಗಳು ಹಾಗೂ ಅದರ ಡೋಸೇಜ್‌ಗಳು ಬೇರೆ. ಮಕ್ಕಳಿಗೆ ಯಾವ ಸಂದರ್ಭದಲ್ಲಿ ಎಂತಹ ಔಷಧ ನೀಡಬೇಕಾಗುತ್ತದೆ ಎಂಬ ಬಗ್ಗೆಯೂ ಸಾಮಾನ್ಯ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ 10 ಮಂದಿ ಮಕ್ಕಳ ತಜ್ಞರ ತಂಡವನ್ನು ರಚಿಸಲಿದ್ದೇವೆ. ಈ ತಜ್ಞರು ದೂರವಾಣಿ ಮೂಲಕ ವೈದ್ಯಕೀಯ ಸಲಹೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ನೂರಾರು ಕಡೆ ಮಕ್ಕಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳಿರುತ್ತವೆ. ಮಕ್ಕಳನ್ನು ಯಾವ ರೀತಿ ಆರೈಕೆ ಮಾಡಬೇಕು, ತುರ್ತು ಸಂದರ್ಭದಲ್ಲಿ ಯಾವ ಔಷಧ ನೀಡಬೇಕಾಗುತ್ತದೆ ಎಂದು ಅಲ್ಲಿನ ವೈದ್ಯರು ಕರೆ ಮಾಡಿ ಈ ತಂಡದ ತಜ್ಞರಿಂದ ಮಾಹಿತಿ ಪಡೆಯಬಹುದು’ ಎಂದು ಆರ್‌.ಅಶೋಕ ತಿಳಿಸಿದರು.

‘ಕೋವಿಡ್‌ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಕೆಲವು ಆಸ್ಪತ್ರೆಗಳನ್ನು ಗುರುತಿಸಲಾಗುತ್ತಿದೆ. ಅಲ್ಲದೇ ಮಕ್ಕಳ ಚಿಕಿತ್ಸೆಗಾಗಿಯೇ ಪದ್ಮನಾಭನಗರದಲ್ಲಿ  40 ಹಾಸಿಗೆಯ ಹೊಸ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿಗೆ ಸೂಚಿಸಿದ್ದೇನೆ. ಈಗಾಗಲೇ ಅಲ್ಲಿನ ಹಾಸಿಗೆ ವ್ಯವಸ್ಥೆ ಹಾಗೂ ತಂದೆ ತಾಯಿಯೂ ಮಕ್ಕಳ ಜೊತೆ ಉಳಿದುಕೊಳ್ಳಲು ಅಗತ್ಯವಿರುವ ಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. ಮೂರನೇ ಅಲೆಗೆ ಅಕ್ಟೋಬರ್ ವರೆಗೂ ಸಮಯವಿದೆ, ಅಷ್ಟರಲ್ಲಿ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com