ಬೆಂಗಳೂರು: ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಬಂದ ಬಳಿಕ ಲಾಕ್ಡೌನ್ ತೆರವುಗೊಳಿಸುವಂತೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ನೀಡಿದ್ದು, ಇದರ ನಡುವೆಯೇ ರಾಜ್ಯದ 94 ತಾಲೂಕುಗಳಲ್ಲಿ ಡಬಲ್ ಡಿಜಿಟ್ ಪಾಸಿಟಿವಿಟಿ ಪ್ರಮಾಣ ದಾಖಲಾಗಿರುವುದು ಕಂಡು ಬಂದಿದೆ.
ಆತಂಕದ ವಿಚಾರವೆಂದರೆ 94 ತಾಲೂಕುಗಳ ಪೈಕಿ 9 (ಬೆಳಗಾವಿಯ ರಾಯ್ಬಾಗ್, ಬೆಂಗಳೂರು ಗ್ರಾಮಾಂತರ ಪ್ರದೇಶದ ದೊಡ್ಡಬಳ್ಳಾಪುರ, ಚಿಕ್ಕಮಗಳೂರಿನ ತಾರೀಕೆರೆ ಮತ್ತು ನರಸಿಂಹರಾಜಪುರ, ಚನ್ನಗಿರಿ, ಹರಿಹಾರ ಮತ್ತು ದಾವಣಗೆರೆಯ ಹೊನ್ನಾಳಿ ಮತ್ತು ಶಿವಮೊಗ್ಗದ ಭದ್ರವತಿ) ತಾಲೂಕುಗಳಲ್ಲಿ ಪಾಟಿಸಿವಿ ಪ್ರಮಾಣ ಶೇ.30ಕ್ಕಿಂತಲೂ ಹೆಚ್ಚಾಗಿರುವುದು ಕಂಡು ಬಂದಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ರಾಜ್ಯದ 6 (ಚಾಮರಾಜನಗರದ ಯೆಲ್ಲಂದೂರು, ಚಿಕ್ಕಮಗಳೂರಿನ ಕೊಪ್ಪಾ, ಚಿತ್ರದುರ್ಗದ ಮೊಳಕಾಲ್ಮೂರಿ, ದಕ್ಷಿಣ ಕನ್ನಡದ ಪುತ್ತೂರು ಮತ್ತು ಶಿವಮೊಗ್ಗದ ಶಿಕಾರಿಪುರ) ತಾಲೂಕುಗಳು ಶೇ.25-30 ಸಕ್ರಿಯ ಪ್ರಕರಣಗಳಿರುವುದು ತಿಳಿದುಬಂದಿದೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತನಾಡಿ, ವಲಸಿಗರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಜನರ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿಯವರು ಮಾತನಾಡಿ, ಶಿವಮೊಗ್ಗದ ಭದ್ರಾವತಿ, ಶಿಕಾರಿಪುರ ಹಾಗೂ ಇತರೆ ಟೌನ್ ಗಳಲ್ಲಿ ಹೆಚ್ಚಿನ ಪಾಸಿಟಿವಿಟಿ ಪ್ರಮಾಣ ಪತ್ತೆಯಾಗಿದೆ. ಮೇ ತಿಂಗಳಿನಲ್ಲಿ 77 ಗ್ರಾಮಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣ ಪತ್ತೆಯಾಗಿದ್ದವು. ಕಳೆದ 2 ವಾರಗಳಿಂದ ಕಂಟೈನ್ಮೆಂಟ್ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ 23 ಗ್ರಾಮಗಳಲ್ಲಿ ಸೋಂಕು ಇಳಿಕೆಯಾಗಿದೆ. ಪ್ರತೀ ಗ್ರಾಮದಲ್ಲೂ ಇದೀಗ 20 ಸೋಂಕು ಪ್ರಕರಣಗಳಿವೆ. ಜಿಲ್ಲೆಯಲ್ಲಿ 490 ಕಂಟೈನ್ಮೆಂಟ್ ಜೋನ್ ಗಳಿದ್ದು, ಗ್ರಾಮಗಳಲ್ಲಿ ನಡೆಸಲಾದ ಶೇ.70 ರಷ್ಟು ಪರೀಕ್ಷೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೆಂಗಳೂರಿನಿಂದ ವಾಪಸ್ಸಾದವರಲ್ಲೇ ಹೆಚ್ಚು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮೀಣ ಪ್ರದೇಶದ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿಯವರು ಮಾತನಾಡಿ, ಬೆಂಗಳೂರಿನಿಂದ ಗ್ರಾಮಗಳಿಗೆ ಹೆಚ್ಚು ಜನರು ಬಂದಿದ್ದು, ಇದರಿಂದ ಸೋಂಕು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಡಿ.ಉಮೇಶ್ ಅವರು ಮಾತನಾಡಿ, ಕೆಲವು ತಾಲೂಕುಗಳಿಗೆ ಬೆಂಗಳೂರಿನಿಂದ ಹೆಚ್ಚು ಜನರು ಬಂದಿದ್ದು, ಈ ಕಾರಣದಿಂದಲೇ ಸೋಂಕು ಹೆಚ್ಚಾಗಿದೆ. ಪಾಸಿಟಿವಿಟಿ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡಿ, ಈಗಾಗಲೇ ದೈನಂದಿನ ಪರೀಕ್ಷೆಗಳ ಸಂಖ್ಯೆಯನ್ನು 6000ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಹೆಚ್ಚೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ ಎಂದು ಹೇಳಿದ್ದಾರೆ.
Advertisement