ಬೆಂಗಳೂರು: ಅನ್ ಲಾಕ್ ಆಗುತ್ತಿದೆಯೆಂದರೆ ಕೊರೋನಾ ಸೋಂಕು ಸಂಪೂರ್ಣ ಹೋಗಿದೆ ಎಂದರ್ಥವಲ್ಲ, ಜನರು ಇನ್ನಷ್ಟು ಎಚ್ಚರಿಕೆಯಾಗಿರಬೇಕು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರದಿಂದ ಕರ್ನಾಟಕ ಅರ್ಧಪಾಲು ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದರೂ ಜನ ಇಂದಿನಿಂದಲೇ ಓಡಾಡಲು ಆರಂಭಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆಯಾಗಿದೆಯೆಂದರೆ ಜನರು ಬೇಕಾಬಿಟ್ಟಿ ಓಡಾಡಬಹುದು ಎಂದರ್ಥವಲ್ಲ. ಇನ್ನಷ್ಟು ಎಚ್ಚರಿಕೆಯಿಂದಿರಬೇಕು ಎಂದರು.
ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ಮೇಲೆ ನಾವು ಸ್ವಲ್ಪ ಮಟ್ಟಿಗೆ ಸುರಕ್ಷಿತ ಎಂದು ಭಾವಿಸಬಹುದು, ಶೇಕಡಾ 70ರಷ್ಟು ಜನಸಂಖ್ಯೆಗೆ ಲಸಿಕೆ ಸಿಗಬೇಕು, ಆಗ ಸೋಂಕು ನಿಯಂತ್ರಣಕ್ಕೆ ಬರಬಹುದು. ಅಲ್ಲಿಯವರೆಗೂ ಪರಿಸ್ಥಿತಿ ಸೂಕ್ಷ್ಮವಾಗಿರುತ್ತದೆ ಎಂದರು.
ಲಾಕ್ ಡೌನ್ ನ್ನು ಸಡಿಲಿಕೆ ಮಾಡುತ್ತಿರುವುದು ಜನರ ಅನುಕೂಲಕ್ಕಾಗಿ, ದೀರ್ಘಕಾಲದವರೆಗೆ ನಿರ್ಬಂಧ ವಿಧಿಸಿದರೆ ಜನಸಾಮಾನ್ಯರ ಬದುಕಿಗೆ ಕಷ್ಟವಾಗುತ್ತದೆ ಜೊತೆಗೆ ಆರ್ಥಿಕವಾಗಿಯೂ ಬಹಳ ನಷ್ಟವಾಗುತ್ತದೆ ಎಂದು, ಅದನ್ನು ಯಾರೂ ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಕೇಳಿಕೊಂಡರು.
ಕೊರೋನಾ ಲಸಿಕೆಯ ಎರಡೂ ಡೋಸ್ ಪಡೆಯುವರೆಗೂ ಜನರು ಎಚ್ಚರಿಕೆಯಿಂದಿರಬೇಕು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಭರವಸೆ ನೀಡಿದರು.
ಜೂನ್ 14ರಿಂದ ಹಂತ ಹಂತವಾಗಿ ಕ್ರಮೇಣ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು, ಸರ್ಕಾರ ನಿನ್ನೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
Advertisement