ಬೆಂಗಳೂರು: ನಗರದ ಶಿವಾನಂದ ವೃತ್ತದಲ್ಲಿ ಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿಗೆ ತೊಡಕಾಗಿದ್ದ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೂಚಿಸಿದ್ದಾರೆ.
ಶನಿವಾರ ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಒಟ್ಟು 493 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಮೇಲ್ಸೇತುವೆಗೆ 16 ಪಿಲ್ಲರ್ ಗಳು ಇರಲಿದ್ದು, ಈಗಾಗಲೇ 15 ಪಿಲ್ಲರ್ ಗಳ ಕಾಮಗಾರಿ ಪೂರ್ಣಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಜಲಮಂಡಳಿಯಲ್ಲಿ 450 ಮಿಲಿ ಮೀಟರ್ ನೀರಿನ ಪೈಪ್ ಲೈನ್ ಬೇರೆಡೆ ಸ್ಥಳಾಂತರಿಸಲಾಗಿದೆ. ಅದರಡಿ 700 ಎಂಎಂ ನೀರಿನ ಪೈಪ್ ಲೈನ್ ಇದ್ದ ಪರಿಣಾಮ ಪಿಲ್ಲರ್ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪೈಪ್ ಲೈನ್ ಬದಲಿಸಿದ್ದು, ಪಿಲ್ಲರ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಮೇಲ್ಸೇತುವೆ ಎರಡು ಕಡೆ ರಸ್ತೆ ದುರಸ್ತಿಯಾಗಬೇಕಿದೆ. ನಂತರ ಬಂದ್ ಮಾಡಿರುವ ರಸ್ತೆಗಳನ್ನು ಹಂತ-ಹಂತವಾಗಿ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಭಾಗದಲ್ಲಿ ಸಂಚಾರ ದಟ್ಟಣೆಯಾಗದಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿಸುವಂತೆ ಮತ್ತು ಕಾಮಗಾರಿ ಮುಗಿದಿರುವ ಕಡೆ ಸರ್ವೀಸ್ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಜನರ ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮ್ಗಾರಿ ನಡೆದ ಜಾಗದಲ್ಲಿ ಇರುವ ಉಪಕರಣಗಳು, ನಿರ್ಮಾಣ ವಸ್ತುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
Advertisement