ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಮಾಹಿತಿ ಬಹಿರಂಗಪಡಿಸಬೇಡಿ: ಪೊಲೀಸರಿಗೆ 'ಹೈ' ಸೂಚನೆ

ಅಪರಾಧ ಕೃತ್ಯಗಳ ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪೊಲೀಸ್ ಅಧಿಕಾರಿಗಳು ಮಾಹಿತಿಗಳನ್ನು ಬಹಿರಂಗಪಡಿಸುತ್ತಿರುವುದಕ್ಕೆ ಹೈಕೋರ್ಟ್ ಮಂಗಳವಾರ ತೀವ್ರವಾಗಿ ಕೆಂಡಾಮಂಡಲಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಪರಾಧ ಕೃತ್ಯಗಳ ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪೊಲೀಸ್ ಅಧಿಕಾರಿಗಳು ಮಾಹಿತಿಗಳನ್ನು ಬಹಿರಂಗಪಡಿಸುತ್ತಿರುವುದಕ್ಕೆ ಹೈಕೋರ್ಟ್ ಮಂಗಳವಾರ ತೀವ್ರವಾಗಿ ಕೆಂಡಾಮಂಡಲಗೊಂಡಿದೆ. 

ಹೆಚ್ನಾಗಭೂಷಣ ರಾವ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹಾಗೂ ಸೂರಜ್ ಗೋವಿಂದರಾಜು ಅವರನ್ನು ಒಳಗೊಂಡ ಪೀಠ, ಅಪರಾಧ ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೂ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬಗ್ಗೆಯಾಗಲೀ ಅಥವಾ ದೂರುದಾರರ ಬಗ್ಗೆಯಾಗಲೀ ಯಾವುದೇ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ. ಅಲ್ಲದೆ, ಈ ಕುರಿತು ನಿಯಮ ರೂಪಿಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಾಲ್ಕು ವಾರ ಗಡುವು ನೀಡಿದೆ.

ತನಿಖಾ ಹಂತದಲ್ಲಿರುವ ಅಪರಾಧ ಪ್ರಕರಣಗಳ ಬಗ್ಗೆ ತನಿಖಾಧಿಕಾರಿಗಳು ಯಾವುದೇ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಬಾರದು. ಪ್ರಕರಣಗಳ ತನಿಖೆಯಲ್ಲಿ ತನಿಖೆ ಕುರಿತು ಅಂತಿಮವಾಗುವವರೆಗೂ ಆರೋಪಿಗಳ ಬಗ್ಗೆಯಾಗಲೀ, ಪಿರ್ಯಾದಿ ಬಗ್ಗೆಯಾಗಲೀ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಹೈಕೋರ್ಟ್ ಪೀಠ ಸೂಚಿಸಿದೆ.

ಈ ವಿಚಾರವಾಗಿ ಪೊಲೀಸರಿಗೆ ನಿರ್ದೇಶನ ನೀಡಬೇಕಿದೆ. ತನಿಖಾ ಹಂತದಲ್ಲಿರುವ ಯಾವುದೇ ಅಪರಾಧ ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೂ ತನಿಖೆಯ ಅಂಶಗಳು ಬಹಿರಂಗವಾಗಬಾರದು. ಆರೋಪಿಗಳ ಹಾಗೂ ಪಿರ್ಯಾದಿದಾರರ ವಿವರ ಕೂಡ ಬಹಿರಂಗ ಪಡಿಸಬಾರದು. ಈ ಕುರಿತು ಸ್ಪಷ್ಟ ನಿರ್ದೇಶನವನ್ನು ಪೊಲೀಸ್ ತನಿಖಾಧಿಕಾರಿಗಳಿಗೆ ನೀಡಬೇಕಿದೆ. ಅವನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಈ ಅಂಶಗಳ ಆಧಾರದ ಮೇಲೆ ನಿಯಮ ರೂಪಿಸಿ ನ್ಯಾಯಾಲಯಕ್ಕೆ ನಾಲ್ಕು ವಾರದಲ್ಲಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತನಿಖಾ ಹಂತದಲ್ಲಿರುವ ಪ್ರಕರಣಗಳ ಪ್ರಸಾರ ಹಾಗೂ ಅಶ್ಲೀಲಕರ ದೃಶ್ಯ ಪ್ರಸಾರದ ಮೇಲೆ ನಿಯಂತ್ರಣ ವಿಧಿಸುವ ಜತೆಗೆ ನಿಯಮಗಳನ್ನು ರೂಪಿಸುವಂತೆ ನ್ಯಾಯಾಲಯ ಆದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೇ, ತನಿಖಾ ಹಂತದಲ್ಲಿರುವ ಪ್ರಕರಣ ಕುರಿತು ನಿಮ್ಮ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳ ಎದುರು ನಿಂತು ಆರೋಪಿಗಳ ವಿರುದ್ಧ 100 ರಷ್ಟು ಸಾಕ್ಷಿಗಳಿವೆ ಎಂದು ಹೇಳಬಾರದು. ಹೀಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆಯೇ ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತು. ಇಂತಹ ಪ್ರಸಂಗ ಮುಂದೆ ಎದುರಾದರೆ ನ್ಯಾಯಾಲಯ ನ್ಯಾಯಿಕ ನೋಟಿಸ್ ನೀಡಿ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿ ಪ್ರಕರಣವನ್ನು ಜು. 20 ಕ್ಕೆ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com