ಬೆಂಗಳೂರು: ಐಐಎಸ್ ಸಿ 2005 ರ ದಾಳಿಯ ಆರೋಪಿಯನ್ನು ಎನ್ಐಎ ಕೋರ್ಟ್ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ತ್ರಿಪುರಾದ ನಿವಾಸಿ ಮೊಹಮ್ಮದ್ ಹಬೀಬ್ (41) ನ್ನು ಐಐಎಸ್ ಸಿ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ 2005 ರ ಡಿಸೆಂಬರ್ ನಲ್ಲಿ ಬಂಧಿಸಲಾಗಿತ್ತು.
ಐಐಟಿ-ದೆಹಲಿಯ ಮುಖ್ಯಸ್ಥ ಪ್ರೊಫೆಸರ್ ಮುನೀಷ್ ಚಂದ್ರ ಪುರಿ ಸಾವನ್ನಪ್ಪಿದ್ದರೆ ನಾಲ್ವರು ವಿಜ್ಞಾನಿಗಳು ತೀವ್ರವಾಗಿ ಗಾಯಗೊಂಡಿದ್ದರು. ಐಐಎಸ್ ಸಿ ಕ್ಯಾಂಪಸ್ ನಲ್ಲಿ 2005 ರ ಡಿ.28 ರಂದು ನಡೆಯುತ್ತಿದ್ದ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಭೆಯಲ್ಲಿ ಗನ್ ಮ್ಯಾನ್ ಓರ್ವರು ಗುಂಡಿನ ದಾಳಿ ನಡೆಸಿದ್ದರು.
ಗ್ಯಾರೇಜ್ ಮೆಕಾನಿಕ್ ಆಗಿದ್ದ ಹಬೀಬ್ ನ್ನು 2017 ರಲ್ಲಿ ಎನ್ಐಎ ಬಂಧಿಸಿತ್ತು. ಲಖನೌ ಪೊಲೀಸರು 2008 ರಲ್ಲಿ ಬಂಧಿಸಿದ್ದ ಸಬಾಹುದ್ದೀನ್ ನ್ನು ಐಐಎಸ್ ಸಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ವ್ಯಕ್ತಿ ನೀಡಿದ ಮಾಹಿತಿಯನ್ನಾಧರಿಸಿ ಹಬೀಬ್ ನ್ನು ಬಂಧಿಸಲಾಗಿತ್ತು. ಆರೋಪಿ ಸಬಾಹುದ್ದೀನ್ ನೀಡಿದ ಮಾಹಿತಿಯ ಪ್ರಕಾರ ಹಬೀಬ್ ಸಬಾಹುದ್ದೀನ್ ಗೆ ಬಾಂಗ್ಲಾ ಗಡಿ ದಾಟುವುದಕ್ಕೆ ಸಹಾಯ ಮಾಡಿದ್ದ.
ಹಬೀಬ್ ವಿರುದ್ಧ ಸೆಕ್ಷನ್ 121 (ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು) 307 (ಕೊಲೆ ಯತ್ನ) ಯುಎಪಿಎ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇದರ ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಪ್ರಾಸಿಕ್ಯೂಷನ್ ಮೇಲ್ನೋಟಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸ್ಪಷ್ಟಪಡಿಸಿಲ್ಲ, ಆತನ ವಿರುದ್ಧ ಏಕೆ ಈ ಪ್ರಕರಣದಲ್ಲಿ ಆರೋಪಿಯೊಂದಿಗೆ ಆಪಾದನೆ ಹೊರಿಸಲಾಗಿದೆ ಎಂದು ಅರ್ಥವಾಗುತ್ತಿಲ್ಲ ಎಂದು ವಿಶೇಷ ನ್ಯಾಯಾಧೀಶ ಕಸನಪ್ಪ ನಾಯ್ಕ್ ಹೇಳಿದ್ದು, ಆರೋಪಿಯನ್ನು ಈ ಪ್ರಕರಣದಲ್ಲಿ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ್ದಾರೆ.
Advertisement