ಮೈಸೂರು ಸೇರಿ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್‍ ನಿಯಮಗಳು ಸಡಿಲ

ಮೈಸೂರು ಸೇರಿ ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಈಗಾಗಲೇ ಅನ್‍ ಲಾಕ್‍ ಮಾರ್ಗಸೂಚಿಗಳಿರುವ ಜಿಲ್ಲೆಗಳು/ನಗರ ಪಟ್ಟಿಗಳಿಗೆ ಈ ಜಿಲ್ಲೆಗಳನ್ನು ಸೇರಿಸಲಾಗಿದೆ.
ಲಾಕ್ ಡೌನ್ ನಿಯಮ (ಪಿಟಿಐ ಚಿತ್ರ)
ಲಾಕ್ ಡೌನ್ ನಿಯಮ (ಪಿಟಿಐ ಚಿತ್ರ)

ಬೆಂಗಳೂರು: ಮೈಸೂರು ಸೇರಿ ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಈಗಾಗಲೇ ಅನ್‍ ಲಾಕ್‍ ಮಾರ್ಗಸೂಚಿಗಳಿರುವ ಜಿಲ್ಲೆಗಳು/ನಗರ ಪಟ್ಟಿಗಳಿಗೆ ಈ ಜಿಲ್ಲೆಗಳನ್ನು ಸೇರಿಸಲಾಗಿದೆ.

ಮುಖ್ಯಕಾರ್ಯದರ್ಶಿ ಪಿ ರವಿ ಕುಮಾರ್ ಅವರು ಹೊರಡಿಸಿರುವ ಆದೇಶದಲ್ಲಿ, ಪಾಸಿಟಿವಿಟಿ ದರ ಗಣನೀಯವಾಗಿ ಕುಸಿಯುತ್ತಿರುವ ಆದರೆ, ಇದು ಶೇ 5ಕ್ಕಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳ ಸಡಿಲಿಕೆ ಮಾಡಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ವರ್ಗ-1ಕ್ಕೆ ಸೇರುತ್ತವೆ. ಮೈಸೂರು ವರ್ಗ-2ರಲ್ಲಿದ್ದರೆ, ಚಾಮರಾಜನಗರ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ವರ್ಗ-1ಕ್ಕೆ ಸೇರಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಈ ಜಿಲ್ಲೆಗಳಲ್ಲಿ ನಿರ್ಬಂಧಗಳ ಸಡಿಲಿಕೆಯಾಗಲಿದ್ದು, ಇವು ಮುಂದಿನ ತಿಂಗಳ 5ನೇ ತಾರಿಖು ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರುತ್ತವೆ. ರಾತ್ರಿ ಕರ್ಫ್ಯೂ ಸಂಜೆ  7ರಿಂದ ಬೆಳಿಗ್ಗೆ 5ರವರೆಗೆ ಇರಲಿದ್ದು, ವಾರಾಂತ್ಯ ಕರ್ಫ್ಯೂ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಇರಲಿದೆ. ಈ ಅವಧಿಯಲ್ಲಿ ಕೇವಲ ಅಗತ್ಯವಸ್ತುಗಳ ಖರೀದಿಗೆ ಅವಕಾಶವಿರುತ್ತದೆ.

ಕೈಗಾರಿಕೆಗಳು, ಉದ್ಯಮಗಳು ಮತ್ತು ಇತರ ಉತ್ಪಾದಕ ಘಟಕಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕೋವಿಡ್ ಮಾರ್ಗಸೂಚಿಗಳಡಿ ಕಾರ್ಯನಿರ್ವಹಿಸಲಿವೆ. ಆದರೆ, ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಶೇ 30ರಷ್ಟು ಸಾಮರ್ಥ್ಯದೊಂದಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ.ಆಹಾರ, ದಿನಸಿ, ತರಕಾರಿ, ಮಾಂಸ ಮತ್ತು ಮೀನು ಹಾಗೂ ಹೈನುಗಾರಿಕೆ ಉತ್ಪನ್ನಗಳು, ಪ್ರಾಣಿ ಆಹಾರ ಮಾರುವ ಅಂಗಡಿಗಳಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ನೀಡಲಾಗಿದೆ. ಮದ್ಯದಂಗಡಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ನಗರದಲ್ಲಿ ದಿನದ 24 ತಾಸು ಮನೆಗೆ ಆಹಾರ ಪೂರೈಸುವ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಅಂತೆಯೇ, ಕಟ್ಟಡ ನಿರ್ಮಾಣ ಕೆಲಸಗಳು, ಉಕ್ಕು ಮತ್ತು ಸಿಮೆಂಟ್ ಸಂಬಂಧಿತ ಕೆಲಸಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು, ಉದ್ಯಾನಗಳು ಬೆಳಿಗ್ಗೆ  5ರಿಂದ 10ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com