ಬೆಂಗಳೂರು: ಕೋಲಾರ ಜಿಲ್ಲೆ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ ಕಿಸಾನ್ ರೈಲಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಯಡಿಯೂರಪ್ಪ, ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್ ರೈಲು ವಹಿಸುತ್ತಿರುವ ಪಾತ್ರ ಮಹತ್ವದ್ದು ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಾವಿನ ಬೆಳೆಗಾರರಿಗೆ ಈ ಯೋಜನೆಯಿಂದ ಲಾಭವಾಗುತ್ತಿದೆ. ಇತರ ತರಕಾರಿ ಹಾಗೂ ಹಣ್ಣು ಬೆಳೆಗಾರರು ಸಹ ಈ ಅವಕಾಶ ಬಳಸಿಕೊಂಡು ಅವರ ಉತ್ಪನ್ನಗಳಿಗೆ ಹೆಚ್ಚಿನ ಲಾಭ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಕರೆ ನೀಡಿದರು.
ಕಿಸಾನ್ ರೈಲು ಯೋಜನೆಯಡಿ ರೈತರ ಗುಂಪು, ವರ್ತಕರು, ಲೈಸೆನ್ಸ್ ಹೊಂದಿರುವ ಕಮೀಷನ್ ಏಜೆಂಟ್ಸ್, ರಫ್ತುದಾರರು ಹಾಗೂ ಇನ್ನಿತರೆ ಭಾಗಿದಾರರಿಗೆ ನಿಯಮಾನುಸಾರ ರೈಲ್ವೆ ಸಾಗಾಣಿಕೆ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ಸಿಗಲಿದೆ ಎಂದರು.
ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳನ್ನು ಸುರಕ್ಷಿತವಾಗಿ, ತ್ವರಿತವಾಗಿ ಬೇಡಿಕೆ ಇರುವ ಮಾರುಕಟ್ಟೆಗಳಲ್ಲಿ ತಲುಪಿಸುವಲ್ಲಿ ಕಿಸಾನ್ ರೈಲು ನೆರವಾಗಲಿದ್ದು, ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಹೇಳಿದರು.
Advertisement