ಕಾಡ್ಗಿಚ್ಚಿನಲ್ಲಿ ನಾಗರಹೊಳೆ ಅಭಯಾರಣ್ಯ ಹೊತ್ತಿ ಉರಿಯುತ್ತಿದ್ದರೆ, ಮೋಜು ಮಸ್ತಿಯಲ್ಲಿ ಆರಣ್ಯ ಸಿಬ್ಬಂದಿ ನಿರತ!
ನಾಗರಹೊಳೆ ಅಭಯಾರಣ್ಯದಲ್ಲಿ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇದರ ನಡುವೆ ಮತ್ತೊಂದು ಆತಂಕಕಾರಿ ಅಂಶವೆಂದರೆ ಬೆಂಕಿಯಿಂದಾಗಿ ಅಭಯಾರಣ್ಯ ಹೊತ್ತಿ ಉರಿಯುತ್ತಿದ್ದರೆ ಇಲ್ಲಿನ ಅರಣ್ಯ ಸಿಬ್ಬಂದಿ ಮಾತ್ರ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.
Published: 06th March 2021 01:37 PM | Last Updated: 06th March 2021 01:43 PM | A+A A-

ಬೆಂಗಳೂರು: ನಾಗರಹೊಳೆ ಅಭಯಾರಣ್ಯದಲ್ಲಿ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇದರ ನಡುವೆ ಮತ್ತೊಂದು ಆತಂಕಕಾರಿ ಅಂಶವೆಂದರೆ ಬೆಂಕಿಯಿಂದಾಗಿ ಅಭಯಾರಣ್ಯ ಹೊತ್ತಿ ಉರಿಯುತ್ತಿದ್ದರೆ ಇಲ್ಲಿನ ಅರಣ್ಯ ಸಿಬ್ಬಂದಿ ಮಾತ್ರ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದ್ದು, ಈ ವರ್ಷವೂ ಕೂಡ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ 'ಶೂನ್ಯ ಕಾಡ್ಗಿಚ್ಚು' ಮಾತು ಉಳಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲರಾಗಿದ್ದಾರೆ. ಒಂದೆಡೆ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿದ್ದರೆ ಮತ್ತೊಂದೆಡೆ ಸಿಬ್ಬಂದಿಗಳು ಮಾತ್ರ ವಿಶ್ವ ವನ್ಯಜೀವಿ ದಿನಾಚರಣೆಯನ್ನು ಆಚರಿಸುವಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಅಲ್ಲದೆ ಈ ಹಿಂದೆ ನಿಧನರಾಗಿದ್ದ ಐಎಫ್ಎಸ್ ಅಧಿಕಾರಿ ಎಸ್ ಮಣಿಕಂದನ್ ಅವರ ಮೂರನೇ ಪುಣ್ಯತಿಥಿ ಕಾರ್ಯಕ್ರಮ ಕೂಡ ಆಯೋಜನೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಪರಿಣಾಮ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ದಮನಕಟ್ಟೆಯಲ್ಲಿ ಸುಮಾರು 20 ಹೆಕ್ಟೇರ್ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿದೆ. ಇನ್ನು ಬೆಂಕಿ ಅವಘಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಫ್ ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ತಜ್ಞರು ಹೇಳಿರುವಂತೆ ಪ್ರಸ್ತುತ ಬೆಂಕಿ ಕಾಣಿಸಿಕೊಂಡ ಸ್ಥಳವು ಅರಣ್ಯ ಗಡಿಯಿಂದ ಸುಮಾರು 50-ರಿಂದ 100 ಮೀಟರ್ ದೂರದಲ್ಲಿದ್ದು, ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದ ಪ್ರದೇಶದಿಂದ 10 ಕಿಮೀ ದೂರದಲ್ಲಿದೆ. ಇಲ್ಲಿನ ಅಧಿಕಾರಿಗಳು ಅದು ಹೇಗೆ ದುಷ್ಕರ್ಮಿಗಳು ಅರಣ್ಯ ಗಡಿಯೊಳಗೆ ನುಗ್ಗಿ ಬೆಂಕಿ ಹಾಕಿದರು ಎಂಬ ವಿಚಾರದ ಗೋಜಿಗೇ ಹೋಗಿಲ್ಲ. ಬೆಂಕಿ ಹೊತ್ತಿಕೊಂಡ ಪ್ರದೇಶ ಸಿಬ್ಬಂದಿಗಳಿರುವ ವಾಚ್ ಟವರ್ ಇರುವ ಉಬ್ದೂರ್ ಗೇಟ್ ತುಂಬಾ ದೂರವೇನೂ ಇಲ್ಲ. ಹೀಗಿದ್ದು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಒಂದು ವೇಳೆ ಸಿಬ್ಬಂದಿ ಅಲರ್ಟ್ ಆಗಿ ಇದಿದ್ದರೆ ಆಗುತ್ತಿದ್ದ ಸಾಕಷ್ಟು ಆರಣ್ಯ ನಷ್ಟವನ್ನು ತಡೆಯಬಹುದಿತ್ತು.
ಇನ್ನೂ ಆಘಾತಕಾರಿ ಅಂಶವೆಂದರೆ ಕಾರ್ಯಕ್ರಮದ ನಿಮಿತ್ತ ಸಿಬ್ಬಂದಿಗಳು ಆರಣ್ಯದೊಳಗೇ ಆಹಾರ ತಯಾರಿಸಿಕೊಂಡಿದ್ದರು. ಇಂತಹ ಘಟನೆಗಳಿಂದಾಗಿ ಅರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚಾಗುವ ಅಪಾಯ ಹೆಚ್ಚು. ಪ್ರಮುಖವಾಗಿ ಬೇಸಿಗೆ ಸಂದರ್ಭದಲ್ಲಿ ಅರಣ್ಯದಲ್ಲಿನ ಗಿಡ ಮರಗಳು ಒಣಗಿರುತ್ತವೆ. ಈ ಸಂದರ್ಭದಲ್ಲಿ ಅಡುಗೆ ಮಾಡಲು ಬಳಸುವ ಬೆಂಕಿಯ ಕಿಡಿ ಗಾಳಿಯಲ್ಲಿ ಒಣಗಿದ ಮರಗಳನ್ನು ತಾಕಿದರೂ ಕಾಡ್ಗಿಚ್ಚು ಹೊತ್ತಿಕೊಳ್ಳುತ್ತದೆ. ಅರಣ್ಯದೊಳಗೆ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಇನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳ ಕರ್ತವ್ಯಲೋಪವನ್ನು ಒಪ್ಪಿಕೊಂಡಿದ್ದು, ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಗಸ್ತು ತಂಡ ಕಾರ್ಯ ನಿರ್ವಹಿಸುತ್ತಿತ್ತು. ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ. ಅಂತೆಯೇ ಉಬ್ದೂರುಗೇಟ್ ಬಳಿಯ ಗಡಿಯಲ್ಲಿ ಕರ್ನಾಟಕವು ಅತ್ಯಂತ ಕಡಿಮೆ ಪ್ರಮಾಣದ ಅರಣ್ಯ ಭೂಮಿ ಪಾಲನ್ನು ಹೊಂದಿದೆ. ಇಲ್ಲಿ ಸ್ಥಳೀಯ ದುಷ್ಕರ್ಮಿಗಳು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಬೆಂಕಿ ಹಚ್ಚಿದ್ದಾರೆ. ಇದನ್ನು ತಡೆಯಲು ಸಿಬ್ಬಂದಿಗಳು ವಿಫಲರಾಗಿದ್ದಾರೆ. ಅದಾಗ್ಯೂ ದುಷ್ಕರ್ಮಿಗಳು ಸ್ಥಳೀಯರೇ ಆಗಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಒಂದು ವೇಳೆ ಇಲಾಖೆ ಕ್ರಮ ಕೈಗೊಂಡರೆ ಅವರನ್ನು ಮತ್ತಷ್ಟು ಪ್ರಚೋದಿಸುದಂತಾಗುತ್ತದೆ. ಇದರಿಂದ ಅಪಾಯವೇ ಹೆಚ್ಚು. ಹವಾಮಾನ ಎಚ್ಚರಿಕೆಗಳನ್ನು ಹಂಚಿಕೊಳ್ಳಲಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.