ಬೆಂಗಳೂರು: ಆಕ್ಸಿಜನ್ ತುರ್ತಾಗಿ ಅಗತ್ಯವಿರುವ ಕೋವಿಡ್-19 ರೋಗಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆಮ್ಲಜನಕ ಪೂರೈಕೆ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.
ಹೆಲ್ಪ್ ಡೆಸ್ಕ್, ಕೋವಿಡ್ ಕೇರ್ ಕೇಂದ್ರಗಳು, ಕಿದ್ವಾಯಿ ಹಾಗೂ ಅಪೋಲೋ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೌರವ್ ಗುಪ್ತ, 10 ಹೆರಿಗೆ ಆಸ್ಪತ್ರೆಗಳನ್ನು ಆಮ್ಲಜನಕ ಪೂರೈಕೆ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ.
ಈ ಆಸ್ಪತ್ರೆಗಳಲ್ಲಿ ತುರ್ತು ಅಗತ್ಯವಿರುವವರಿಗೆ ಸಹಾಯ ದೊರೆಯಲಿದ್ದು ಟ್ರಯೇಜಿಂಗ್ ಮೂಲಕ ವೈದ್ಯರು ಯಾರಿಗೆ ಆಕ್ಸಿಜನ್ ತುರ್ತಾಗಿ ಅವಶ್ಯಕತೆ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಿದ್ದಾರೆ ಎಂದು ಗುಪ್ತ ವಿವರಿಸಿದ್ದಾರೆ.
ರಾಜಾಜಿನಗರ ಹೆರಿಗೆ ಆಸ್ಪತ್ರೆ, ಕಾವೇರಿಪುರ ಹೆರಿಗೆ ಆಸ್ಪತ್ರೆ, ಗವಿಪುರಂ ಗುಟ್ಟಳ್ಳಿ ರೆಫರೆಲ್ ಹೆರಿಗೆ ಆಸ್ಪತ್ರೆ, ಆಜಾದ್ ನಗರ, ಪೊಬ್ಬತಿ ಹೆರಿಗೆ ಆಸ್ಪತ್ರೆ, ಮಾಗಡಿ ರಸ್ತೆ ಹೆರಿಗೆ ಆಸ್ಪತ್ರೆ, ಆಡುಗೋಡಿ ಹೆರಿಗೆ ಆಸ್ಪತ್ರೆ, ತಾವರೆಕೆರೆ ಹೆರಿಗೆ ಆಸ್ಪತ್ರೆ, ಹೊಸಕೆರೆ ರೆಫರೆಲ್ ಆಸ್ಪತ್ರೆ, ಶಾಂತಿನಗರ್ ಹೆರಿಗೆ ಆಸ್ಪತ್ರೆ, ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಗಳನ್ನು ಆಮ್ಲಜನಕ ಪೂರೈಕೆ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಿಕೊಳ್ಳಲಾಗಿದೆ.
ಮನೆಯಲ್ಲಿ ಐಸೊಲೇಷನ್ ನಲ್ಲಿರುವವರು ಆಕ್ಸಿಜನ್ ಅಗತ್ಯವಿದ್ದಲ್ಲಿ, ಈ ಕೇಂದ್ರಗಳಿಗೆ ದಾಖಲಾಗಬಹುದಾಗಿದೆ. ಇದನ್ನು ಹೊರತುಪಡಿಸಿ, ಮನೆಯಲ್ಲಿರುವವರಿಗೆ ಆಕ್ಸಿಜನ್ ಅಗತ್ಯವಿದ್ದಲ್ಲಿ ಸಹಾಯ ಮಾಡಲು ಒಂದು ತಂಡ ಯತ್ನಿಸುತ್ತಿದೆ ಎಂದು ಗೌರವ್ ಗುಪ್ತ ಮಾಹಿತಿ ನೀಡಿದ್ದಾರೆ.
ಇನ್ನು ಟೆಸ್ಟಿಂಗ್ ಬಗ್ಗೆಯೂ ಗೌರವ್ ಗುಪ್ತ ಮಾಹಿತಿ ನೀಡಿದ್ದು, ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಸ್ವಯಂಚಾಲಿತ ಟೆಸ್ಟಿಂಗ್ ಸೌಲಭ್ಯವಿದ್ದು, ದಿನವೊಂದಕ್ಕೆ 6,000 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುವ ಬದಲು ಅದನ್ನು 20,000 ಕ್ಕೆ ಏರಿಕೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದೆ ವೇಳೆ ಬಿಯು ನಂಬರ್ ಗಳನ್ನು ನೀಡುವುದರಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
50 ಪ್ರಮುಖ ಆಸ್ಪತ್ರೆಗಳಲ್ಲಿ ನಾಗರಿಕ ಸೇವಾ ಡೆಸ್ಕ್ ಗಳನ್ನು ತೆರೆಯಲಾಗುತ್ತಿದ್ದು ಈ ಪೈಕಿ ಈಗಾಗಲೇ 25 ಸ್ಥಾಪನೆಯಾಗಿದೆ. 24*7 ಡೆಸ್ಕ್ ಗಳು ಜನರ ಗೊಂದಲಗಳಿಗೆ ಪರಿಹಾರ ಒದಗಿಸುವ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
Advertisement