ನಗರದಲ್ಲಿ ಹೆಚ್ಚಿದ ಕೋವಿಡ್ ಸಾವು: ಶವಾಗಾರಗಳಲ್ಲಿ ಆರಂಭವಾದ ಉರುವಲು ಸಮಸ್ಯೆ, ಬಿಬಿಎಂಪಿಗೆ ಶುರುವಾಯ್ತು ಮತ್ತೊಂದು ತಲೆನೋವು!

ಕೊರೋನಾ 2ನೇ ಆರಂಭವಾದಾಗಿನಿಂದಲೂ ಬಿಬಿಎಂಪಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ನಗರದಲ್ಲಿ ಕೊರೋನಾ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮೊದಲು ಸ್ಥಳದ ಅಭಾವ. ನಂತರ ಮೃತದೇಹ ಶವಸಂಸ್ಕಾರದ ವಿಳಂಬ ಸಮಸ್ಯೆಯಾಗಿ ಬಿಬಿಎಂಪಿಯನ್ನು ಕಾಡಿತ್ತು. ಇದೀಗ ಉರುವಲು ಕೊರತೆ ಸಮಸ್ಯೆ ಶುರುವಾಗತೊಡಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ 2ನೇ ಆರಂಭವಾದಾಗಿನಿಂದಲೂ ಬಿಬಿಎಂಪಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ನಗರದಲ್ಲಿ ಕೊರೋನಾ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮೊದಲು ಸ್ಥಳದ ಅಭಾವ. ನಂತರ ಮೃತದೇಹ ಶವಸಂಸ್ಕಾರದ ವಿಳಂಬ ಸಮಸ್ಯೆಯಾಗಿ ಬಿಬಿಎಂಪಿಯನ್ನು ಕಾಡಿತ್ತು. ಇದೀಗ ಉರುವಲು ಕೊರತೆ ಸಮಸ್ಯೆ ಶುರುವಾಗತೊಡಗಿದೆ. 

ಈ ಪರಿಸ್ಥಿತಿ ಕುರಿತು ಇದೀಗ ರಾಜ್ಯ ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 

ಬಿಬಿಎಂಪಿ ಅರಣ್ಯ ವ್ಯಾಪ್ತಿಯಲ್ಲಿ ಇದೀಗ ಕೇವಲ 150 ಟನ್ ನಷ್ಟು ಮರಗಳು ಮಾತ್ರ ಬಾಕಿ ಉಳಿದಿವೆ. ಸರ್ಕಾರ ಈಗಾಗಲೇ ಮೂರು ತಾತ್ಕಾಲಿಕ ಶವಾಗಾರವನ್ನು ತೆರೆದಿದ್ದು, ಈ ಶವಾಗಾರಗಳಲ್ಲಿ 10 ದಿನಗಳಲ್ಲಿ 200 ಟನ್ ನಷ್ಟು ಮರಗಳನ್ನು ಬಳಕೆ ಮಾಡಲಾಗಿದೆ. ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ 1,300-1,500 ಕೆಜಿ ಮರದ ಅಗತ್ಯವಿದೆ ಎಂದು ಹೇಳಿದ್ದಾರೆ. 

ಪ್ರತೀ ಶವಾಗಾರದಲ್ಲಿ ಒಂದು ದಿನಕ್ಕೆ 42 ಶವಗಳನ್ನು ಸುಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದರೆ, ಶವಗಳ ಅಂತ್ಯಸಂಸ್ಕಾರಕ್ಕೆ ಉರುವಲು ಕೊರತೆ ಎದುರಾಗಲಿದೆ. ಹೀಗಾಗಿ ನಮಗೆ ಬೇರೆ ದಾರಿಯಿಲ್ಲ. ಪರಿಸ್ಥಿತಿ ನಿಭಾಯಿಸಲು ಮರಗಳನ್ನು ಕಡಿಯಲೇ ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ಈ ನಡುವೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ರಾಜ್ಯ ಸರ್ಕಾರ ಇದೀಗ ಹಣ ಪಾವತಿ ಮಾಡಿ ಅರಣ್ಯ ಇಲಾಖೆಯಿಂದ ಮರಗಳನ್ನು ಖರೀದಿ ಮಾಡುತ್ತಿದೆ ಎಂದು ತಿಳಿದುಬಂದಿದೆ. 

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧಿಕಾರಿಗಳು ಮಾತನಾಡಿ, ಸರ್ಕಾರ ಶೀಘ್ರಾತಿ ಶೀಘ್ರದಲ್ಲಿ ಮರಗಳು ಬೇಕೆಂದು ಹೇಳಿದೆ. ನಮ್ಮ ಬಳಿ ಅಂತ್ಯಸಂಸ್ಕಾರಕ್ಕೆ ಬಳಕೆ ಮಾಡುವ ಮರಗಳು ಇಲ್ಲ. ಹೀಗಾಗಿ ನಾವು ಸರಬರಾಜು ಮಾಡುವವರು, ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ. 

ಮರ ಕಡಿಯುವುದು ಬಿಟ್ಟು ಬೇರೆ ದಾರಿಯಿಲ್ಲ: ಅಧಿಕಾರಿಗಳು
ಅಂತ್ಯಸಂಸ್ಕಾರಕ್ಕೆ ಬಿಬಿಎಂಪಿ ಮರಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ, ಗುತ್ತಿಗೆದಾರರು ಸರ್ಕಾರಕ್ಕೆ ಪ್ರತೀ ಟನ್ ಮರಗಳಿಗೆ ರೂ.4,300 ಹಣ ನೀಡುವಂತೆ ತಿಳಿಸಿದ್ದಾರೆ. 

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಇಷ್ಟು ಮೊತ್ತ ಪಾವತಿ ಮಾಡುವುತು ಸರ್ಕಾರಕ್ಕೆ ಸಂಕಷ್ಟವನ್ನು ಎದುರು ಮಾಡಲಿದೆ. ಹೀಗಾಗಿ ನಾವು ಅಂತ್ಯಸಂಸ್ಕಾರಕ್ಕೆ ಬಳಕೆ ಮಾಡುವ ಇತರೆ ಮರಗಳ ಕುರಿತು ಮರದ ಡಿಪೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆಂದು ಅಧಿಕಾರಿಗಳು ಹೇಳಿದ್ದಾರೆ. 

ವಿದ್ಯುತ್ ಶವಾಗಾರದಲ್ಲಿ ಹೆಚ್ಚೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಚಿತಾಗಾರಗಳ ಬಳಿ ಜನರು ಗಂಟೆಗಟ್ಟಲೆ ಕಾಯುವಂತಾಗಿದೆ. ಅಲ್ಲದೆ. ನೈರ್ಮಲ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ದೂರಾಗಿಸಲು ಸರ್ಕಾರ ಹಿಂದಿನ ಸಾಂಪ್ರಾದಾಯಿಕ ಪದ್ಧತಿ ಅನುಸರಿಸಲು ಮುಂದಾಗಿತ್ತು. ಆಧರೆ, ಇದೀಗ ಮರಗಳ ಸಮಸ್ಯೆ ಎದುರಾಗಿದೆ. 

ಹೀಗಾಗಿ ವಿದ್ಯುತ್ ರಹಿತ ಶವಾಗಾರ ತೆರೆಯಲು ನಿರ್ಧರಿಸಲಾಗಿತ್ತು. ಇನ್ನು ಮರಗಳನ್ನು ಬಳಸಿ ಶವಗಳನ್ನು ಸುಡಲು 5-8 ಗಂಟೆ ತೆಗೆದುಕೊಳ್ಳುತ್ತದೆ. ಅದೂ ಕೂಡ ಮರದ ಪ್ರಕಾರ ಅವಲಂಭಿಸಿ ಸಮಯ ನಿರ್ಧರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಇದೀಗ ನಾವು ಪರಿಸರ ಸಮಸ್ಯೆಗಳು ಮತ್ತು ಶವಾಗಾರಕ್ಕೆ ಮರವನ್ನು ಒದಗಿಸುವ ಸರ್ಕಾರದ ಆದೇಶ ಎರಡರ ಕುರಿತಂತೆಯೂ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ, ಸಾವಿನ ಸಂಖ್ಯೆ ಇದೇ ರೀತಿ ಹೆಚ್ಚಳವಾಗುತ್ತಲೇ ಹೋದರೆ, ನಮಗೆ ಮರಗಳನ್ನು ಕಡಿಯುವುದು ಅಥವಾ ಗುತ್ತಿಗೆದಾರರಿಂದ ಮರಗಳನ್ನು ಖರೀದಿಸುವುದು ಬಿಟ್ಟು ಬೇರೆ ದಾರಿಯಿಲ್ಲ. ಈ ಗುತ್ತಿಗೆದಾರರೂ ಕೂಡ ಮರಗಳನ್ನು ಕಡಿದೇ ನಮಗೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com