ಮೈಸೂರು: ಒಂದೆಡೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳಿಲ್ಲ ಎಂಬ ದೂರು ಕೇಳಿ ಬರುತ್ತಿದೆ, ಆದರೆ ಕೆಲ ಆಸ್ಪತ್ರೆಗಳಲ್ಲಿ ಸಿಬ್ಬಂದಿಯಿರದ ಕಾರಣ ವೆಂಟಿಲೇಟರ್ ಬಳಕೆಯಾಗುತ್ತಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ.
ಎಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮತ್ತು ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ತಮ್ಮ ತಾಲೂಕು ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಗಳು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರ ಗಮನಕ್ಕೆ ತಂದಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಕೋವಿಡ್ ವಾರ್ ರೂಮ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಲ್ಲಿ ಐದು ವೆಂಟುಲೇಟರ್ ಸುಮ್ಮನೆ ಬಿದ್ದಿವೆ ಎಂದು ಹೇಳಿದ್ದಾರೆ, ರೋಗಿಗಳು ಮೈಸೂರು ಆಸ್ಪತ್ರೆಗೆ ಬರುತ್ತಿದ್ದಾರೆ, ಆದರೆ ನುರಿತ ಸಿಬ್ಬಂದಿ ಇದ್ದರೆ ಮಾತ್ರ ಅದನ್ನು ಬಳಸಲು ಸಾಧ್ಯ , ಆದರೆ ಈ ಆಸ್ಪತ್ರೆಗೆ ಸಿಬ್ಬಂದಿ ನೇಮಿಸುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.
ನಾವು ವೈದ್ಯರನ್ನು ಸಹ ಕೇಳಿದ್ದೇವೆ, ಆದರೆ ನಮ್ಮ ಬೇಡಿಕೆ ಇನ್ನೂ ಹಾಗೆಯೇ ಉಳಿದಿದೆ ಎಂದು ಹುಣಸೂರು ಶಾಸಕ ಮಂಜುನಾಥ್ ಹೇಳಿದ್ದಾರೆ.ಕೇವಲ ವೆಂಟಿಲೇಟರ್ ಮಾತ್ರವಲ್ಲ ಸಿಟಿ ಸ್ಕ್ಯಾನ್ ಯಂತ್ರ ಕೂಡ ಬಳಕೆಯಾಗುತ್ತಿಲ್ಲ, ಇದನ್ನು ಬಳಕೆ ಮಾಡಲು ಸಿಬ್ಬಂದಿ ಕೊರತೆಯಿದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ಗಳ ಕೊರತೆಯಿದೆ, ನಮ್ಮ ಆಸ್ಪತ್ರೆಯಲ್ಲಿದ್ದ 19 ಹಿರಿಯ ನರ್ಸ್ ಗಳಿಗೆ ಬಡ್ತಿ ನೀಡಿ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ.
ಹಳ್ಳಿಗಳಲ್ಲೂ ಕೂಡ ಕೊರೋನಾ ಕೇಸ್ ಹೆಚ್ಚಾಗುತ್ತಿವೆ, ನಮ್ಮಲ್ಲಿ 14 ತಾಲೂಕುಗಳನ್ನು ಕಂಟೈನ್ ಮೆಂಟ್ ಜೋನ್ ಗಳೆಂದು ಗುರುತಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಬೆಡ್ ಗಳನ್ನು ಹೆಚ್ಚಿಸುವ ಬದಲು ಇರುವ ಸೌಲಭ್ಯಗಳನ್ನು ಬಳಸಿಕೊಂಡು ಆಕ್ಸಿಜನ್ ಮತ್ತು ಔಷಧಿ ವ್ಯವಸ್ಥೆ ನೀಡಬೇಕು ಎಂದು ನರಸಿಂಹ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
Advertisement