ಜನರು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರುವುದೇ ಗಂಭೀರ ಪರಿಸ್ಥಿತಿಗೆ ಕಾರಣ: ಸಚಿವ ಎಸ್ ಸುರೇಶ್ ಕುಮಾರ್ ಹೇಳಿಕೆ
ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ರೋಗಿಗಳು ಮೃತಪಟ್ಟಿರಲು ಸಾಧ್ಯವಿಲ್ಲ, ಬೇರೆ ಬೇರೆ ರೋಗಗಳಿಂದ ಆಸ್ಪತ್ರೆಗೆ ಬಂದು ದಾಖಲಾದವರು ಇದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
Published: 03rd May 2021 11:53 AM | Last Updated: 03rd May 2021 03:04 PM | A+A A-

ಎಸ್ ಸುರೇಶ್ ಕುಮಾರ್
ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ರೋಗಿಗಳು ಮೃತಪಟ್ಟಿರಲು ಸಾಧ್ಯವಿಲ್ಲ, ಬೇರೆ ಬೇರೆ ರೋಗಗಳಿಂದ ಆಸ್ಪತ್ರೆಗೆ ಬಂದು ದಾಖಲಾದವರು ಇದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಸಾವಿನ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊನೆ ಗಳಿಗೆಯವರೆಗೆ ಮನೆಯಲ್ಲಿ ಕುಳಿತು, ಬೇರೆ ಬೇರೆ ಔಷಧಿಗಳನ್ನು ಮಾಡಿ ನೋಡಿ ಗುಣವಾಗದೆ ಆ ಮೇಲೆ ಆಸ್ಪತ್ರೆಗೆ ಹೋಗುವ ಪರಿಪಾಠ ಬಿಟ್ಟುಬಿಡಿ, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದ ಕೂಡಲೇ ಆಸ್ಪತ್ರೆಗೆ ಬಂದು ದಾಖಲಾದರೆ ಈ ರೀತಿ ಹೆಚ್ಚಿನ ಸಾವಿನ ಪ್ರಮಾಣ ತಪ್ಪಿಸಬಹುದು ಎಂದರು.
ಇನ್ನು 12 ಗಂಟೆಯೊಳಗೆ ಡೆತ್ ರಿಪೋರ್ಟ್ ಆಡಿಟ್ ಬರುತ್ತದೆ, ಅದಕ್ಕಾಗಿ ನಾವು ಕಾಯತ್ತಿದ್ದೇವೆ ಎಂದು ಹೇಳಿದರು.
ಎಲ್ಲವೂ ಆಮ್ಲಜನಕದ ಕೊರತೆಯಿಂದ ಅಲ್ಲ: ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆಯವರೆಗೆ 24 ಸಾವು ಸಂಭವಿಸಿದೆ, ಇದು ಅತ್ಯಂತ ದುಃಖದ ಸಂಗತಿ, ಇಲ್ಲಿ 24 ಮಂದಿ ಕೂಡ ಆಮ್ಲಜನಕದ ಕೊರತೆಯಿಂದ ಮೃತಪಟ್ಟರು ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ವರದಿ ಕೇಳಿದ್ದೇನೆ ಎಂದರು.
ಕಳೆದ ಮಧ್ಯರಾತ್ರಿ 12.30ಯಿಂದ 2.30ಯವರೆಗೆ ಆಮ್ಲಜನಕದ ಕೊರತೆಯುಂಟಾಗಿದೆ. ಮೃತಪಟ್ಟ ರೋಗಿಗಳು ಯಾವಾಗ ದಾಖಲಾಗಿದ್ದರು, ಬಂದಾಗ ಯಾವ ಸ್ಥಿತಿಯಲ್ಲಿದ್ದರು, ಅವರಿಗೆ ಏನು ಸಮಸ್ಯೆಯಿತ್ತು ಎಂದು ಸಂಪೂರ್ಣ ಮಾಹಿತಿ ಕೇಳಿದ್ದೇನೆ. ತನಿಖೆ ವೇಳೆ ಯಾರಾದ್ದಾದರೂ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಗೊತ್ತಾದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಿನ್ನೆ ಆಮ್ಲಜನಕ ಕೊರತೆಯಿದೆ ಎಂದು ಗೊತ್ತಾದ ತಕ್ಷಣ 80 ಸಿಲಿಂಡರ್ ಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಮೈಸೂರಿನಿಂದ ನಮಗೆ ಬರಬೇಕಾಗಿದ್ದು ಬರದೆ ಸ್ವಲ್ಪ ತೊಂದರೆಯಾಯಿತು ಎಂದು ತಿಳಿಸಿದರು.
arnataka | 24 patients, including COVID-19 patients, died at Chamarajanagar District Hospital due to oxygen shortage & others reasons in last 24 hours. We are waiting for the death audit report: District Incharge Minister Suresh Kumar
(Visuals from outside the hospital) pic.twitter.com/8wEOkEEBvm
— ANI (@ANI) May 3, 2021
ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ: ಪ್ರಕರಣ ಇಷ್ಟು ಗಂಭೀರವಾಗಿದ್ದರೂ, ಸರ್ಕಾರದಿಂದ ಸರಿಯಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೂ ಸಚಿವರು ಈ ರೀತಿ ಜಾರುವಂತೆ ನಯವಾಗಿ ಹೇಳಿಕೆ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.