ಮೈಸೂರು: ಹಣಕಾಸಿನ ಕೊರತೆ ಅಥವಾ ಸರ್ಕಾರದ ಅಸಮರ್ಥತೆ ಏನೆಂದು ಹೇಳಬೇಕು ತಿಳಿದಿಲ್ಲ. ಹೀಗಾಗಿ ಹಳೇ ಮೈಸೂರು ಭಾಗದ ಜನ ವೈದ್ಯಕೀಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಉದ್ಯಮಿಗಳ ಮೊರೆ ಹೋಗಿದ್ದಾರೆ.
ಆಕ್ಸಿಜನ್ ಕೊರತೆ, ಬೆಡ್ ಗಳು ಮತ್ತು ಅತ್ಯಾಧುನಿಕ ಉಪಕರಣಗಳ ಖರೀದಿಗೆ ಹಣಕಾಸು ನೆರವು ನೀಡುವಂತೆ ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.
ಬಿಬಿಎಂಪ್ ಮುಖ್ಯ ಆಯುಕ್ತ ಗೌರವ್ ಗುಪ್ತ ಆರೋಗ್ಯ ಸೌಲಭ್ಯಗಳ ವೃದ್ಧಿಸಲು ದಾನಿಗಳಲ್ಲಿ ಮನವಿ ಮಾಡಿದ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೊರೋನಾ ವಿರುದ್ಧ ಹೋರಾಟ ನಡೆಸಲು ಕೈಗಾರಿಕೋದ್ಯಮಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವಿವಿಧ ಉದ್ಯಮಿಗಳ ಜೊತೆ ಸಭೆ ನಡೆಸಿದ ರೋಹಿಣಿ ಸಿಂಧೂರಿ ಸಿಎಸ್ ಆರ್ ಫಂಡ್ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ವರ್ಷ ಸಿಎಸ್ ಆರ್ ಅನುದಾನದಡಿ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗಿತ್ತು.
ಹೀಗಾಗಿ ಈ ಬಾರಿಯೂ ಮೈಸೂರಿನಲ್ಲಿ ಕೋವಿಡ್ ಮಿತ್ರ ಕೇಂದ್ರಗಳ ಮೂಲಕ ತಮ್ಮ ದೇಣಿಗೆ ನೀಡಬೇಕೆಂದು ತಿಳಿಸಿದ್ದಾರೆ. ಕೇವಲ ಮೈಸೂರು ಮಾತ್ರವಲ್ಲ ಮಂಡ್ಯದಲ್ಲಿಯೂ ಕೂಡ, ಆಕ್ಸಿಜನ್ ಮತ್ತು ಬೆಡ್ ಕೊರತೆಯಿದೆ ಎಂದು ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ತಮ್ಮ ಗಮನಕ್ಕೆ ಬಂದ ನಂತರ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿ ದಿನ 2 ಕಿಲೋ ಆಕ್ಸಿಜನ್ ಪೂರೈಕೆ ಮಾಡಲು ಮುಂದಾಗಿದ್ದಾರೆ. ಸಂಸದರ ನಿಧಿಯಿಂದ ಹಣ ಇರದ ಕಾರಣ ಸುಮಲತಾ ಅಂಬರೀಷ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೆಆರ್ ನಗರ, ಶಾಸಕ ಸಾರಾ ಮಹೇಶ್ ಕೂಡ ಕೋವಿಡ್ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿದ್ದು 100 ಬೆಡ್ ಗಳ ವ್ಯವಸ್ಥೆ ಮಾಡಿದ್ದಾರೆ.
Advertisement