ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಹಿಂಪಡೆಯುವಂತೆ ತನ್ನ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಜಗದೀಶ್ಗೆ ಆಮಿಷ ಒಡ್ಡುತ್ತಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣದ ತನಿಖಾಧಿಕಾರಿ ಎಸಿಪಿ ಕವಿತಾ ಮತ್ತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸಂತ್ರಸ್ತೆ ಪತ್ರ ರವಾನಿಸಿದ್ದಾರೆ. ಮೊನ್ನೆ ಸೋಮವಾರ ( ಮೇ 3) ಸಂಜೆ 4:37ಕ್ಕೆ ಪ್ರದೀಪ್ ಎಂಬಾತ ವಾಟ್ಸಪ್ ಕಾಲ್ ಮಾಡಿದ್ದಾನೆ. ಐ ಹ್ಯಾವ್ ವಿ ಗುಡ್ ಆಫರ್ ಟು ಯೂ ಎಂದು ಆಮಿಷ ಒಡ್ಡಿದ್ದಾರೆ. ಕೇಸ್ ಹಿಂಪಡೆಯಿರಿ. ಪಡೆದರೆ ಕೋಟ್ಯಾಂತರ ರೂ ಗೆ ಸೆಟಲ್ ಮೆಂಟ್ ಮಾಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.
ಇತ್ತ ರಮೇಶ್ ಜಾರಕಿಹೊಳಿ ಕೋವಿಡ್ ನೆಪ ಹೇಳಿದ್ದಾರೆ. ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಕಬ್ಬನ್ ಪಾರ್ಕ್ ನಲ್ಲಿ ನಾನು ನೀಡಿದ್ದ ದೂರಿನ ಅನ್ವಯ ವಿಚಾರಣೆಯನ್ನೂ ನಡೆಸಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಾಕ್ಷ್ಯ ನಾಶ ಮಾಡಲು ರಮೇಶ್ ಜಾರಕಿಹೊಳಿ ಯತ್ನಿಸುತ್ತಿದ್ದಾರೆ. ಸಂತ್ರಸ್ತೆ ಪರ ವಕೀಲರಿಗೆ ರಮೇಶ್ ಜಾರಕಿಹೊಳಿ ಮಗ ಅಮರ್ ನಾಥ್ ಜಾರಕಿಹೊಳಿಯ ಸ್ನೇಹಿತ ಎಂದು ಫೋನ್ ಕರೆ ಮಾಡಿದ್ದ ಪ್ರದೀಪ್ ಕೋಟಿಗಟ್ಟಲೇ ಆಫರ್ ನೀಡಿದ್ದಾನೆ. 15 ದಿನಗಳಿಂದ ವಕೀಲರಿಗೆ ಫೋನ್ ಮಾಡಿ ಕೋಟಿ ಕೋಟಿ ಆಮಿಷ ಒಡ್ಡಿದ್ದಾರೆ.
ಪ್ರಭು ಪಾಟೀಲ್ ಎಂಬಾತ ಪ್ರದೀಪ್ ಹೆಸರಿನಲ್ಲಿ ವಕೀಲರಿಗೆ ಕರೆ ಮಾಡಿದ್ದಾನೆ. ವಕೀಲರು ಯಾವಾಗ ಈ ವಿಷಯವನ್ನ ತನಿಖಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರೋ, ಆ ಕೂಡಲೇ ಕರೆಯನ್ನು ಕಟ್ ಮಾಡಿದ್ದಾನೆ ಎಂದು ಸಿಡಿ ಯುವತಿ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ. ಸಾಕ್ಷ್ಯನಾಶಕ್ಕೆ ತನ್ನ ಹಿಂಬಾಲಕರ ಮೂಲಕ ಪ್ರಯತ್ನಿಸುತ್ತಿರುವ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಿ, ತನಗೆ ರಕ್ಷಣೆ ನೀಡುವಂತೆ ಸಂತ್ರಸ್ತೆ ಮನವಿ ಮಾಡಿದ್ದಾರೆ.
Advertisement