ಮೈಸೂರು: ರಾಜ್ಯದಲ್ಲಿ ಕೊರೋನಾ ಭೀಕರತೆ ಪ್ರದರ್ಶಿಸುತ್ತಿದ್ದು, ಸಾವಿರಾರೂ ಜನರು ತಮ್ಮ ಕುಟುಂಬ ಸದಸ್ಯರು, ಪ್ರೀತಿ ಪಾತ್ರರ ಪ್ರಾಣ ಉಳಿಸಲು ಹಾಸಿಗೆ ಪಡೆಯಲು ಒದ್ದಾಡುತ್ತಿದ್ದಾರೆ. ಸಾಮಾನ್ಯ ಜನರ ಜೊತೆ ಜೊತೆಗೆ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಕೂಡ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಅಮರನಾಥ್ ಅವರು ತಮ್ಮ ಅಸಹಾಯಕತೆಯನ್ನು ಫೋನಿನಲ್ಲಿ ಹೇಳಿಕೊಂಡ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಅಮರನಾಥ್ ಅವರು ತಮ್ಮ ಪತ್ನಿಗೂ ವೆಂಟಿಲೇಟರ್ ಬೆಡ್ ಕೊಡಿಸುವ ಯೋಗ್ಯತೆ ಇಲ್ಲ ಎಂದು ಹೇಳಿಕೊಂಡಿರುವ ಮಾತುಗಳು ಇದೀಗ ವೈರಲ್ ಆಗಿದೆ.
ಅಮರ್ ನಾಥ್ ಅವರಿಗೆ ಕರೆ ಮಾಡಿರುವ ಸೋಂಕಿತ ಸಂಬಂಧಿಕರೊಬ್ಬರು ವೆಂಟಿಲೇಟರ್ ಬೆಡ್ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಾರ್ರೂಂಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ
ಕರೆ ಮಾಡಿದರೆ ಯಾರೂ ಕೂಡ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಿದ್ದಾರೆ. ನನಗೂ ಬೆಡ್'ಗೂ ಸಂಬಂಧವಿಲ್ಲ. ನನಗೆ ಬೆಡ್ ಕೊಡಿಸಲು ಆಗುವುದಿಲ್ಲ. ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆಯಿಲ್ಲ. ಇನ್ನು ನಿಮಗೆ ಹೇಗೆ ಬೆಡ್ ಕೊಡಿಸಲಿ? ನನ್ನ ಕೈಯಲ್ಲಿ ಏನೂ ಇಲ್ಲ ಎಂದು ಅಸಾಹಯಕತೆ ತೋಡಿಕೊಂಡಿದ್ದಾರೆ.
ಬಳಿಕ ಸೋಂಕಿತ ವ್ಯಕ್ತಿ ನಿಮಗೆ ಜವಾಬ್ದಾರಿ ಏಕೆ? ಕೆಲಸ ಬಿಟ್ಟು ಹೋಗಿ ಎಂದಿದ್ದಾರೆ. ಕೆಲಸ ಬಿಡಲು ನಾನು ಸಿದ್ಧನಿದ್ದೇನೆ. ನನ್ನ ಮೇಲೆ ಯಾವುದೇ ಆ್ಯಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ಸಿದ್ಧನಿದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಆಡಿಯೋ ಇದೀಗ ವೈರಲ್ ಆಗಿದೆ.
Advertisement