ಬೆಡ್ ಬ್ಲಾಕಿಂಗ್ ಹಗರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಉಲ್ಲೇಖಿಸಿರುವವರನ್ನು ಬಂಧಿಸಿಲ್ಲ - ಮೂಲಗಳು

ಕೋವಿಡ್ ರೋಗಿಗಳಿಗಾಗಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡಲಾಗಿದೆ ಎಂಬ ಆರೋಪ ಸಂಬಂಧ ಈವರೆಗೆ ಐದು ಜನರನ್ನು ಮಾತ್ರ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು: ಕೋವಿಡ್ ರೋಗಿಗಳಿಗಾಗಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡಲಾಗಿದೆ ಎಂಬ ಆರೋಪ ಸಂಬಂಧ ಈವರೆಗೆ ಐದು ಜನರನ್ನು ಮಾತ್ರ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ತನಿಖೆ ನಡೆಯುತ್ತಿದ್ದು "ನಾಲ್ಕು-ಐದು ಜನರನ್ನು ಹೊರತುಪಡಿಸಿ ಮತ್ಯಾರನ್ನು ಬಂಧಿಸಿಲ್ಲ ಎಂದು ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವಿಷಯಗಳನ್ನು ಆಧರಿಸಿ ತನಿಖೆ ನಡೆಸುತ್ತಿಲ್ಲ. ಅಂದರೆ ನಾವು ಬೆಡ್ ಬ್ಲಾಕಿಂಗ್ ಹಗರಣವನ್ನು ಮಾತ್ರ ತನಿಖೆ ಮಾಡುತ್ತಿದ್ದೇವೆ. 'ಬೆಡ್ ಬ್ಲಾಕಿಂಗ್ ಹಗರಣ'ದಲ್ಲಿ ಬಂಧಿಸಲ್ಪಟ್ಟವರು ನೇತ್ರಾವತಿ, ರೋಹಿತ್, ವೆಂಕಟ್ ಸುಬ್ಬ ರಾವ್, ಮಂಜುನಾಥ್ ಮತ್ತು ಪುನೀತ್ ಎಂದು ಪೊಲೀಸರು ತಿಳಿಸಿದ್ದಾರೆ.

ಲೈವ್ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕೆಲ ಮುಸ್ಲಿಮರ ಹೆಸರನ್ನು ಉಲ್ಲೇಖಿಸಿದ್ದು ಈ ಹಗರಣದಲ್ಲಿ ಅವರ ಪಾತ್ರ ಇರುವುದು ತನಿಖೆಯಿಂದ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋವಿಡ್ ವಾರ್ ರೂಂಗೆ ಗುರುವಾರ ಶೋಧ ನಡೆಸಲಾಗಿದ್ದು, ಅಕ್ರಮಗಳನ್ನು ಪರಿಶೀಲಿಸಲು ತಾಂತ್ರಿಕ ಮಾಹಿತಿ ಪಡೆಯಲಾಗಿದೆ. ಅಲ್ಲದೆ, ಪ್ರತಿ ವಲಯದಲ್ಲಿನ ವಾರ್ ರೂಂನ ಉಸ್ತುವಾರಿ ವೈದ್ಯರನ್ನು ಪ್ರಶ್ನಿಸಲಾಗುತ್ತಿದೆ. ಇದಲ್ಲದೆ, ಎಲ್ಲಾ ವಾರ್ ರೂಂಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, ವಾರ್ ರೂಂನ ಯಾವುದೇ ಅನಧಿಕೃತ ವ್ಯಕ್ತಿಯ ಬಗ್ಗೆ ಮತ್ತು ಅದಕ್ಕೆ ಕಾರಣಗಳನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಕರ್ನಾಟಕದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಆಸ್ಪತ್ರೆಗಳು ಹಣ ಸಂಪಾದಿಸಲು ನಕಲಿ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿವೆ ಎಂದು ಆರೋಪಿಸಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳೊಂದಿಗೆ ಹಾಸಿಗೆಗಳನ್ನು ನಿರ್ಬಂಧಿಸಲು ಮತ್ತು ಅದನ್ನು ಅತಿಯಾದ ಶುಲ್ಕಕ್ಕೆ ಕಾಯ್ದಿರಿಸಲು 'ಒಪ್ಪಂದ' ಮಾಡಿದ್ದಾರೆ ಎಂದು ತೇಜಸ್ವಿ ಆರೋಪಿಸಿದ್ದರು.

ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ಕರ್ನಾಟಕ ಸರ್ಕಾರ ಆದೇಶಿಸಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ನಿಯೋಜಿಸಲಾಗಿತ್ತು. 

ಆದಾಗ್ಯೂ, ಕೋವಿಡ್ ಪ್ರಕರಣಗಳಲ್ಲಿ ಆತಂಕಕಾರಿಯಾದ ಏರಿಕೆಯಿಂದಾಗಿ, ಬೇಡಿಕೆಯು ದುಪ್ಪಟ್ಟು ಹೆಚ್ಚಾಗುತ್ತಿದ್ದು, ಬೇಡಿಕೆಯನ್ನು ನಿಭಾಯಿಸಲು ಬಿಬಿಎಂಪಿ ತನ್ನ ವಲಯ ಮಟ್ಟದಲ್ಲಿ ಒಂಬತ್ತು ಕೋವಿಡ್ ವಾರ್ ರೂಂಗಳನ್ನು ಸ್ಥಾಪಿಸಿದ್ದು ಒಪ್ಪಂದದ ಆಧಾರದ ಮೇಲೆ ತನ್ನ ಉದ್ಯೋಗಿಗಳನ್ನು ನಿಯೋಜಿಸಲು ಉದ್ಯೋಗ ಸಂಸ್ಥೆಗೆ ವಹಿಸಿದೆ. ಈ ಸಂಬಂಧ ಮತನಾಡಿರುವ ಬಿಬಿಎಂಪಿ ಅಧಿಕಾರಿಯೊಬ್ಬರು, ವಾರ್ ರೂಮ್‌ಗಳಲ್ಲಿ 214 ಜನರು ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸಂಸದರು ಉಲ್ಲೇಖಿಸಿರುವಂತೆ ಕೇವಲ 16 ಜನರಲ್ಲ ಎಂದರು. 

ಇನ್ನು ಸೂರ್ಯ ಆರೋಪಕ್ಕೆ ತಿರುಗೇಟು ನೀಡಿರುವ ಚಾಮರಾಜ್‌ಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿಡಿಯೋದಲ್ಲಿ 'ಕ್ರಿಸ್ಟಲ್ ಕಂಪನಿಯ 205ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೋವಿಡ್ ವಾರ್ ರೂಂಗೆ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿದೆ ಆದರೆ ನೀವು ಕೇವಲ 16 ಮುಸ್ಲಿಮರನ್ನು ಮಾತ್ರ ಉಲ್ಲೇಖಿಸಿದ್ದೀರೀ ಎಷ್ಟು ಸರಿ? 'ಕೇವಲ ಓರ್ವ ಮೊಹಮ್ಮದ್ ಜೈದ್ ಎಂಬುವರಿಗೆ ಹಾಸಿಗೆ ಹಂಚಿಕೆಯ ಕೆಲಸವನ್ನು ವಹಿಸಲಾಗಿದೆ. ಇತರರಿಗೆ ಬೇರೆ ಬೇರೆ ಕೆಲಸಗಳನ್ನು ನೀಡಲಾಗಿದೆ ಎಂದು ಖಾನ್ ಹೇಳಿದ್ದಾರೆ.

ಅಲ್ಲದೆ ಹಗರಣದ ಆರೋಪದ ನಂತರ 13,000 ರೂ. ಸಂಬಳದೊಂದಿಗೆ ಜೀವನ ಸಾಗಿಸುತ್ತಿದ್ದ 16 ಜನರ ಕೆಲಸ ಈಗ ಅಪಾಯದಲ್ಲಿದೆ ಎಂದು ಜಮೀರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com