ಗಟ್ಟಿಯಾಗಿ ನಿಯಂತ್ರಣ ಮಾಡಿದರೆ ಕೊರೋನಾ ಮಹಾ ರೋಗವಲ್ಲ: ರಮೇಶ್ ಜಾರಕಿಹೊಳಿ
ಗಟ್ಟಿಯಾಗಿ ನಿಯಂತ್ರಣ ಮಾಡಿದರೆ ಕೊರೋನಾ ಮಹಾರೋಗವಲ್ಲ, ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಜನರು ಆಸ್ಪತ್ರೆಗೆ ಹೋಗಬೇಕು ಎಂದು ಬೆಳಗಾವಿಯ ಗೋಕಾಕ್ ಕ್ಷೇತ್ರದ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
Published: 08th May 2021 02:02 PM | Last Updated: 08th May 2021 02:13 PM | A+A A-

ರಮೇಶ್ ಜಾರಕಿಹೊಳಿ
ಗೋಕಾಕ್(ಬೆಳಗಾವಿ): ಗಟ್ಟಿಯಾಗಿ ನಿಯಂತ್ರಣ ಮಾಡಿದರೆ ಕೊರೋನಾ ಮಹಾರೋಗವಲ್ಲ, ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಜನರು ಆಸ್ಪತ್ರೆಗೆ ಹೋಗಬೇಕು, ಇಲ್ಲದಿದ್ದರೆ ಮನೆಯಲ್ಲಿಯೇ ಐಸೊಲೇಟ್ ಆಗಿ ಇದ್ದು ಯೋಗ, ಪ್ರಾಣಾಯಾಮ, ವ್ಯಾಯಾಮ, ಉತ್ತಮ ಆಹಾರ ಸೇವಿಸಿ ಸೋಂಕು ನಿಯಂತ್ರಣ ಮಾಡಬಹುದು. ವೈದ್ಯರ ಸಲಹೆ ಪಡೆದರೆ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ಬೆಳಗಾವಿಯ ಗೋಕಾಕ್ ಕ್ಷೇತ್ರದ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ತಹಶಿಲ್ದಾರ್ ಕಚೇರಿಯಲ್ಲಿಂದು ಅವರು ಕೋವಿಡ್ ನಿರ್ವಹಣಾ ಸಭೆಯಲ್ಲಿ ಭಾಗವಹಿಸಿ ಕೊರೋನಾ ನಿಯಂತ್ರಿಸಲು ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಎರಡು ತಿಂಗಳ ಹಿಂದೆ ತೀವ್ರ ಸಂಚಲನ ಸೃಷ್ಟಿಸಿ ಜಲಸಂಪನ್ಮೂಲ ಸಚಿವ ಖಾತೆಗೆ ರಾಜೀನಾಮೆ ನೀಡಲು ಕಾರಣವಾದ ಸಿಡಿ ಪ್ರಕರಣ ನಂತರ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸುತ್ತಿರುವುದು ಇದು ಮೊದಲ ಸಲ.
ಕೊರೋನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಮುಖ್ಯಮಂತ್ರಿಗಳು, ಸರ್ಕಾರ, ವಿರೋಧ ಪಕ್ಷದ ನಾಯಕರೆಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ನಮ್ಮ ಜವಾಬ್ದಾರಿ, ಕರ್ತವ್ಯ ನಿರ್ವಹಿಸಿ ಕೆಲಸ ಮಾಡಿ ಶೀಘ್ರದಲ್ಲಿಯೇ ಕೊರೋನಾ ಮಹಾಮಾರಿಯನ್ನು ಓಡಿಸಬೇಕು ಎಂದು ಹೇಳಿದರು.