ಹೊನ್ನಾಳಿ: ಹೆಚ್ಚುತ್ತಿರುವ ಕೊರೋನಾ ಸೋಂಕಿನ ಕಾರಣದಿಂದಾಗಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮ ಕಂಟೈನ್ ಮೆಂಟ್ ವಲಯವಾಗುತ್ತಿದೆ. ಹೀಗಾಗಿ ಗ್ರಾಮದಿಂದ ಹೊರಹೋಗುವುದು ಮತ್ತು ಒಳಬರುವುದನ್ನು ನಿಷೇಧಿಸಲಾಗಿದೆ.
ಶುಕ್ರವಾರ ರಾತ್ರಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗ್ರಾಮದಲ್ಲಿ ಸಭೆ ಸೇರಿ ಕಡ್ಡಾಯವಾಗಿ ಗ್ರಾಮಸ್ಥರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆದೇಶಿದ್ದಾರೆ.
ಒಂದು ವೇಳೆ ಕೊರೋನಾ ಪಾಸಿಟಿವ್ ಕಂಡು ಬಂದರೆ ಬೇರೆಯವರಿಗೆ ಸೋಂಕು ಹರಡದೇ ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬೇಕು ಎಂದು ಸೂಚಿಸಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಪರೀಕ್ಷೆ ನಡೆಸಿದ 249 ಮಂದಿಯಲ್ಲಿ 29 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇವರಿಗೆ ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿತ್ತು, ಉಳಿದ 1400 ಜನರಿಗೆ ಕೋವಿಡ್ ಪರೀಕ್ಷೆ ನಡೆಸಬೇಕಿದೆ.
ಗ್ರಾಮದ ಮನೆ ಮನೆಗೆ ತೆರಳಿದ ರೇಣುಕಾಚಾರ್ಯ ಜನರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ, ಪ್ರತಿಯೊಬ್ಬರು ಕೋವಿಡ್ ಪರೀಕ್ಷೆ ನಡೆಸಿಕೊಳ್ಳಬೇಕು ಎಂದು ಹೇಳಿದರು.
ರಾಮೇಶ್ವರ ಗ್ರಾಮದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದೆ ಎಂಬ ವಿಷಯ ತಿಳಿದು ನಾನು ಇಲ್ಲಿಗೆ ಬಂದೆ, ಸೋಂಕಿತ ರೋಗಿಗಳನ್ನು ಸ್ಥಳಾಂತರಿಸುವವರೆಗೂ ನಾನು ಇಲ್ಲಿಯೇ ಇದ್ದು ನಂತರ ಇಲ್ಲಿಂದ ತೆರಳುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ.
ಈಗಾಗಲೇ 29 ರೋಗಿಗಳನ್ನು ಹೊನ್ನಾಳಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅವರಿಗೆ ಚಿಕಿತ್ಸೆ ಸಹ ಪ್ರಾರಂಭಿಸಲಾಗಿದೆ. ರೋಗದ ತೀವ್ರತೆಯ ಆಧಾರದ ಮೇಲೆ ಅವರನ್ನು ಉನ್ನತ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರಗೆ ಹೋಗದಂತೆ ವಿನಂತಿಸಲಾಗಿದೆ, "ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕೆಂದು ನಾನು ವಿನಂತಿಸುತ್ತೇನೆ, ಜನರು ಮುಜುಗರಕ್ಕೊಳಗಾಗಬೇಕಾಗಿಲ್ಲ, ನಾನು ಕೋವಿಡ್ ಪಾಸಿಟಿವ್ ಒಳಗಾಗಿ ಗುಣಮುಖನಾಗಿದ್ದೇನೆ ಎಂದು ಅವರು ಹೇಳಿದರು.
ಸೋಂಕಿತರಿಗೆ ಎಲ್ಲಾ ಸಹಾಯವನ್ನು ಖಚಿತಪಡಿಸಿಕೊಳ್ಳಲು ವೈದ್ಯರ ಕಣ್ಗಾವಲು ತಂಡವು ರಾಮೇಶ್ವರ ಗ್ರಾಮಕ್ಕೆ ಧಾವಿಸಲಿದೆ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಜಿ.ಡಿ.ರಾಘವನ್ ತಿಳಿಸಿದ್ದಾರೆ. ಬೆಂಗಳೂರಿನಿಂದ ಗ್ರಾಮಕ್ಕೆ ಮರಳಿದವರಿಂದ ಸೋಂಕು ಹರಡಿದೆ ಎಂದು ತಿಳಿಸಿದ್ದಾರೆ.
Advertisement