ಬೆಂಗಳೂರಿಗೆ ಆಮ್ಲಜನಕ ಹೊತ್ತ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಆಗಮನ!
ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ 120 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ರೈಲಿನ ಮೂಲಕ ಬೆಂಗಳೂರಿಗೆ ರವಾನಿಸಿದೆ.
ಹೌದು.. ಆರು ಕಂಟೇನರ್ ಗಳಲ್ಲಿ ಸುಮಾರು 120 ಮೆಟ್ರಿಕ್ ಟನ್ ನಷ್ಟು ತೂಕದ ಆಮ್ಲಜನಕ ಹೊತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಆಗಮಿಸಿದೆ. ಜಮ್ ಶೆಡ್ ಪುರದಿಂದ ಬೆಂಗಳೂರಿಗೆ ಎಕ್ಸ್ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್ಗಳು ತಲುಪಿವೆ. ತಲಾ 20 ಟನ್ ತೂಕ ಇರುವ ಆಕ್ಸಿಜನ್ ಕಂಟೇನರ್ಗಳು ಈಗ ವೈಟ್ಫೀಲ್ಡ್ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಆಗಮಿಸಿವೆ.
ಜಮ್ ಶೆಡ್ ಪುರದಿಂದ ನಿನ್ನೆ ಮುಂಜಾನೆ 3ಕ್ಕೆ ಹೊರಟಿದ್ದ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು 30 ಗಂಟೆಗಳ ನಿರಂತರ ಪ್ರಯಾಣದ ಬಳಿಕ ಇಂದು ಬೆಳಗ್ಗೆ ಬೆಂಗಳೂರು ತಲುಪಿದೆ. ಐಎಸ್ಒ ಕಂಟೇನರ್ ಮೂಲಕ ಆಕ್ಸಿಜನ್ ಆಗಮಿಸಿದ್ದು ಒಟ್ಟು 17.50 ಸಾವಿರ ಲೀಟರ್ ಆಕ್ಸಿಜನ್ ತರಿಸಿಕೊಳ್ಳಲಾಗಿದೆ. ಆಕ್ಸಿಜನ್ ಹೊತ್ತ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು, ಕೋವಿಡ್-19 ರೋಗಿಗಳಿಗೆ ನೆರವು ನೀಡುವ ಸಲುವಾಗಿ, ಗುಜರಾತ್ ನ ಟಾಟಾನಗರದಿಂದ 6 ಕಂಟೈನರ್ ಗಳ ಆಕ್ಸಿಜನ್ ಎಕ್ಸ್ ಪ್ರೆಸ್ ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ತಲುಪಿದೆ ಎಂದು ಟ್ವೀಟ್ ಮಾಡಿದ್ದಾರೆ.