ವ್ಯಾಕ್ಸಿನ್ ಕೊರತೆ: ಮನ್ರೇಗಾ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡುವ ಯೋಜನೆಗೆ ಬ್ರೇಕ್!

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 11 ಲಕ್ಷ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ಲಾನ್ ಮಾಡಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 11 ಲಕ್ಷ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ಲಾನ್ ಮಾಡಿತ್ತು.

ಆದರೆ ಲಸಿಕೆ ಕೊರತೆ ಕಾರಣ ಇಲಾಖೆ ಸದ್ಯ ಈ ಯೋಜನೆಗೆ ಬ್ರೇಕ್ ಹಾಕಿದೆ. ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಮನ್ರೇಗಾ ಕೆಲಸವನ್ನು ಸ್ಥಗಿತಗೊಳಿಸಿದ್ದ ಸರ್ಕಾರ, ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಪುನರಾರಂಭಿಸಲು ಬುಧವಾರ ಅವಕಾಶ ನೀಡಿದೆ.

ಮುಂದಿನ ಎರಡು -ಮೂರು ದಿನಗಳಲ್ಲಿ ಆರ್ ಡಿ ಪಿಆರ್ ಸಚಿವ ಕೆ.ಎಸ್ ಈಶ್ವರಪ್ಪ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮನ್ರೇಗಾ ಕಾರ್ಮಿಕರಿಗೆ ಲಸಿಕೆ ನೀಡಲು ಯೋಜಿಸಿದೆ. ಲಸಿಕೆ ಲಭ್ಯವಾದ ಕೂಡಲೇ ಎಲ್ಲಾ ಕಾರ್ಮಿಕರಿಗೂ ಕೋವಿಡ್ ವ್ಯಾಕ್ಸಿನ್ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ಹೇಳಿದ್ದಾರೆ.

ಕೊರೋನಾ ಸಾಂಕ್ರಾಮಿಕದಿಂದಾಗಿ  ಮನ್ರೇಗಾ ಕೆಲಸಕ್ಕೆ ಬೇಡಿಕೆ ಹೆಚ್ಚಿದೆ, ನಗರ ಪ್ರದೇಶಗಳಿಂದ ಗ್ರಾಮಗಳಿಗೆ ತೆರಳಿರುವ ಕಾರ್ಮಿಕರಿಂದಾಗಿ ಈ ವರ್ಷವೂ ಮನ್ರೇಗಾ ಯೋಜನೆಗೆ ಬೇಡಿಕೆ ಹೆಚ್ಚಿದೆ.

ಕೆಲಸ ಸ್ಥಗಿತಗೊಳ್ಳುವ ಮೊದಲು, ಬೆಳಗಾವಿ, ರಾಯಚೂರು, ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ ಮತ್ತು ದಕ್ಷಿಣ ಕರ್ನಾಟಕದ ಕೆಲವು ಭಾಗಗಳು ಸೇರಿದಂತೆ ಹೆಚ್ಚಿನ ಜಿಲ್ಲೆಗಳಲ್ಲಿ ಪ್ರತಿದಿನ ಸುಮಾರು 10 ಲಕ್ಷ ಜನರು ಕೆಲಸ ಮಾಡುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರತಿಯೊಬ್ಬ ಕಾರ್ಮಿಕರಿಗೂ ಅವರು ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

ಲಸಿಕೆ ಪ್ರಮಾಣಗಳ ಕೊರತೆಯೇ ಪ್ರಮುಖ ವಿಷಯವಾಗಿದೆ, ಒಮ್ಮೆ ಪೂರೈಕೆಯಾದರೇ ತಲುಪಿಸಲು ನಮ್ಮಲ್ಲಿ ಒಂದು ಕಾರ್ಯವಿಧಾನವಿದೆ. ಭಾರತವು ದಶಕಗಳಿಂದ ಲಕ್ಷಾಂತರ ಜನರಿಗೆ ಲಸಿಕೆ ನೀಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ತಮ್ಮ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಲಸಿಕೆ ಹಾಕಲು ಯಾವುದೇ ತೊಂದರೆಯಿಲ್ಲ, ಆದರೆ ವೈರಸ್ ಹರಡುವ ಬಗ್ಗೆ ಆತಂಕವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಎಂಎನ್‌ಆರ್‌ಇಜಿಎ ಕೆಲಸದ ಸ್ಥಳಗಳಲ್ಲಿ ಸೇರುತ್ತಾರೆ, ಇದು ಸಾಂಕ್ರಾಮಿಕ ಸಮಯದಲ್ಲಿ ಸೂಕ್ತವಲ್ಲ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಕೊರೋನಾ ಪಾಸಿಟಿವ್ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಯಾವುದೇ ರಾಜ್ಯ ಸರ್ಕಾರವು ಎಂಎನ್‌ಆರ್‌ಇಜಿಎ ಕೆಲಸವನ್ನು ನಿಲ್ಲಿಸಿದರೆ, ಶೇಕಡಾ 50 ರಷ್ಟು ವೇತನವನ್ನು ಕಾರ್ಮಿಕರಿಗೆ ಪಾವತಿಸಬೇಕು ಎಂಬ ನಿಯಮವಿದೆ. ನಮ್ಮ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ, ನಾವು ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಉದ್ಯೋಗಕ್ಕಿಂತ ಜನರ ಜೀವನ ಮುಖ್ಯವಾಗಿದೆ ಎಂದು ಈಶ್ವರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com