ಬೆಂಗಳೂರು: ಭಾರತಕ್ಕೆ ಮುಂಗಾರು ಮಳೆಯನ್ನು ಹೊತ್ತು ತರುವ ನೈಋತ್ಯ ಮಾನ್ಸೂನ್ ಮಾರುತಗಳು ಮೇ.31ರಂದೇ ಕೇರಳ ಪ್ರವೇಶಿಸುತ್ತಿದ್ದು, ಬೆಂಗಳೂರಿನಲ್ಲಿ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ ಬಳಿಕ ಸಾಮಾನ್ಯವಾಗಿ ಬೆಂಗಳೂರಿಗೆ ಈ ಮುಂಗಾರು ಪ್ರವೇಶಿಸಲು ಕನಿಷ್ಟ 5-7 ದಿನಗಳು ಬೇಕಾಗುತ್ತದೆ. ಹೀಗಾಗಿ ಈ ಬಾರಿ ಸಿಲಿಕಾನ್ ಸಿಟಿಗೆ ಜೂನ್ 7 ರಂದು ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಹೇಳಿದ್ದಾರೆ.
ಮುಂಗಾರು ಆಗಮನ ಹವಾಮಾನ ವ್ಯವಸ್ಥೆಗಳ ರಚನೆಯಿಂದ ಕೂಡಿದ್ದು ಕೆಲವೊಮ್ಮೆ ತಡವಾಗಲೂಬಹುದು, ಶೀಘ್ರಗತಿಯಲ್ಲೂ ಪ್ರವೇಶಿಸಬಹುದು. ಆದರೆ, ಪ್ರಸ್ತುತದ ವಾತಾವರಣವನ್ನು ಗಮನಿಸಿದರೆ ನಿಗದಿತ ಸಮಯಕ್ಕೆ ಈ ಬಾರಿ ಮಾನ್ಸೂನ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಮೇ.20 ರಂದೇ ಮಾನ್ಸೂನ್ ಮಾರುತಗಳು ಬೀಸಲಿದ್ದು, ಮೇ.21ರಂದು ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶ ಮತ್ತು ಬಂಗಾಳ ಕೊಲ್ಲಿಯ ದಕ್ಷಿಣ ಭಾಗಗಳಲ್ಲಿ ಮಳೆಯ ಚುರುಕು ಪಡೆಯಲಿದೆ. ಹೀಗಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳಲ್ಲಿ ಮೇ.21ರಂದೇ ಮಾನ್ಸೂನ್ ಮಾರುತಗಳ ಪ್ರವೇಶವಾಗಲಿದೆ. ಈ ಸಲಹ ಮಾನ್ಸೂನ್ ಮಾರುತಗಳು ಸಾಮಾನ್ಯ ಮಳೆ ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement