ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ 56 ಅಡ್ವೊಕೇಟ್ ಗಳ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮತ್ತು ಅಡ್ವೊಕೇಟ್ ಗಳನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸುವಂತೆ ಬೆಂಗಳೂರಿನ ಅಡ್ವೊಕೇಟ್ಸ್ ಅಸೋಸಿಯೇಷನ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅಡ್ವೊಕೇಟ್ ಅಸೋಸಿಯೇಷನ್ ನ ಅಧ್ಯಕ್ಷ ಎ ಪಿ ರಂಗನಾಥ್, ಹಲವು ಯುವ ಅಡ್ವೊಕೇಟ್ ಗಳು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ನೀಡಿ ಎಂದು ಕೋರಿದ್ದಾರೆ.
ಬಾರ್ ಕೌನ್ಸಿಲ್ ನ್ಯಾಯಪೀಠ ಮತ್ತು ಕೋರ್ಟ್ ಸಿಬ್ಬಂದಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಿ ಎಂದು ಕೇಳಿದ ಅವರು, ಹಣಕಾಸು ಮುಗ್ಗಟ್ಟಿನಲ್ಲಿರುವ ಅಡ್ವೊಕೇಟ್ ಗಳಿಗೆ ಕೂಡಲೇ ಧನಸಹಾಯ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಬಹುತೇಕ ಕೋರ್ಟ್ ಗಳು ಮುಚ್ಚಿವೆ. ಹಲವು ಅಡ್ವೊಕೇಟ್ ಗಳು ತಮ್ಮ ಕುಟುಂಬದ ಆದಾಯವನ್ನು ಕಳೆದುಕೊಂಡಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾದ ಅಡ್ವೊಕೇಟ್ ಗಳು ಮತ್ತು ಅವರ ಕುಟುಂಬಸ್ಥರು ಗುಣಮಟ್ಟದ, ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದಿಲ್ಲ. ಹಲವು ಅಡ್ವೊಕೇಟ್ ಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಗತ್ಯ ಖರ್ಚುಗಳಿಗೂ ಕಷ್ಟವಾಗುತ್ತಿದೆ. ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಈ ಕೊರೋನಾ ಸಂದರ್ಭದಲ್ಲಿ ನಿಸ್ವಾರ್ಥ ಸಮಾಜ ಸೇವೆಯಿಂದ ಹಲವು ಅಡ್ವೊಕೇಟ್ ಗಳಿಗೆ ಸೋಂಕು ತಗುಲಿ ದುರಂತ ಅಂತ್ಯ ಕಂಡಿದ್ದಾರೆ ಎಂದು ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
Advertisement