'ಅಮ್ಮನನ್ನು ಕಳೆದುಕೊಂಡೆ, ಅಮ್ಮನ ನೆನಪನ್ನಾದರೂ ಕೊಡಿ': ಮಡಿಕೇರಿಯ 9 ವರ್ಷದ ಬಾಲಕಿಯ ಕರುಣಾಜನಕ ಮನವಿ  

ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ.
ಬಾಲಕಿ ಹೃತಿಕ್ಷಾ
ಬಾಲಕಿ ಹೃತಿಕ್ಷಾ

ಮಡಿಕೇರಿ: ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ.

ಏನಿದು ಘಟನೆ: ಕೊಡಗು ಜಿಲ್ಲೆಯ ಮಡಿಕೇರಿಯ ಕುಶಾಲಪ್ಪನಗರ ಲೇಔಟ್ ನ ಕೋವಿಡ್ ಆಸ್ಪತ್ರೆಯಲ್ಲಿ ಮೊನ್ನೆ ಮೇ 16ರಂದು 9 ವರ್ಷದ ಬಾಲಕಿ ಹೃತಿಕ್ಷಾ ತಾಯಿ ಕೋವಿಡ್ ನಿಂದ ಮೃತಪಟ್ಟಿದ್ದರು.ಅದಕ್ಕೆ 10 ದಿನ ಮೊದಲು ಮೇ 6ರಂದು ಹೃತಿಕ್ಷಾ ತಾಯಿ ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಹೃತಿಕ್ಷಾ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ತಂದೆ 41 ವರ್ಷದ ನವೀನ್ ಕುಮಾರ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು ಮೂವರಿಗೂ ಸೋಂಕು ತಗುಲಿತ್ತು. ತಾಯಿ ರೋಗ ಉಲ್ಬಣಗೊಂಡು ಆಸ್ಪತ್ರೆ ಸೇರಿದ್ದರೆ ತಂದೆ-ಮಗಳು ಹೋಂ ಕ್ವಾರಂಟೈನ್ ನಲ್ಲಿದ್ದರು. 

ಹೃತಿಕ್ಷಾಳ ತಾಯಿ ಆಸ್ಪತ್ರೆಗೆ ದಾಖಲಾದಾಗ ಮೊಬೈಲ್ ಫೋನ್ ಇಟ್ಟುಕೊಂಡಿದ್ದರು. ಅದರಲ್ಲಿ ಅವರ ಫೋಟೋಗಳು, ಕುಟುಂಬಕ್ಕೆ ಸಂಬಂಧಿಸಿದ ಫೋಟೋಗಳು, ಸಂಪರ್ಕ ಸಂಖ್ಯೆಗಳು, ಅನೇಕ ಮಾಹಿತಿಗಳಿದ್ದವು. ಹೃತಿಕ್ಷಾ ಆನ್ ಲೈನ್ ಕ್ಲಾಸ್ ಗೆ ಅವಲಂಬಿತವಾಗಿದ್ದುದು ತಾಯಿಯ ಮೊಬೈಲ್ ನಲ್ಲಿಯೇ, ಇದೀಗ ಆಕೆಯ ತಾಯಿಯ ಜೊತೆ ಮೊಬೈಲ್ ಕೂಡ ಕಾಣೆಯಾಗಿದ್ದು ಬಾಲಕಿ ಹೃತಿಕ್ಷಾಳನ್ನು ಇನ್ನಷ್ಟು ದುಃಖಕ್ಕೀಡುಮಾಡಿದೆ.

ಕಾಣೆಯಾಗಿರುವ ಮೊಬೈಲ್ ನಲ್ಲಿ ತಾಯಿಗೆ ಸಂಬಂಧಪಟ್ಟ ಸಾಕಷ್ಟು ನೆನಪುಗಳಿವೆ, ಫೋಟೋಗಳಿವೆ, ಹೀಗಾಗಿ ಮೊಬೈಲ್ ಹುಡುಕಿಕೊಡಿ ಎಂದು ಬಾಲಕಿ ಹೃತಿಕ್ಷಾ ಮತ್ತು ಆಕೆಯ ತಂದೆ ನವೀನ್ ಕುಮಾರ್ ಕೊಡಗು ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪತ್ನಿ ಸತ್ತ ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಬೇರೆಲ್ಲಾ ವಸ್ತುಗಳು ಸಿಕ್ಕಿವೆ, ಆದರೆ ಮೊಬೈಲ್ ಕಾಣೆಯಾಗಿದೆ, ನಾವು ಆಸ್ಪತ್ರೆಯಲ್ಲಿ ಕೇಳಿದಾಗ ಸಕಾರಾತ್ಮಕ ಉತ್ತರ ಬರಲಿಲ್ಲ, ನಮ್ಮ ಆಸ್ಪತ್ರೆಯಲ್ಲಿ ಮೊಬೈಲ್ ಕಳವಾಗಲು ಸಾಧ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.ನಮಗೆ ತೀವ್ರ ದುಃಖವಾಗಿ ಈ ಮನವಿ ಸಲ್ಲಿಸುತ್ತಿದ್ದೇವೆ ಎಂದು ನವೀನ್ ಕುಮಾರ್ ಹೇಳುತ್ತಿದ್ದಾರೆ.

ಇದೀಗ ಆಸ್ಪತ್ರೆಯ ಸಿಬ್ಬಂದಿಗಳನ್ನೆಲ್ಲಾ ವಿಚಾರಿಸಿ, ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಮೊಬೈಲ್ ಹುಡುಕಿಕೊಡುವ ಭರವಸೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನಿಂದ ದಾಖಲಾಗಿ ಮೃತಪಟ್ಟವರಲ್ಲಿ ಅನೇಕರ ವಸ್ತುಗಳು, ಮೊಬೈಲ್ ಗಳು ಕಾಣೆಯಾಗಿವೆ ಎಂಬ ದೂರುಗಳು ಬಂದಿವೆ. ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಆಭರಣಗಳು, ಹಣ, ಬೇರೆ ವಸ್ತುಗಳು ಕಾಣೆಯಾಗಿರುವ ದೂರುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com