ಬೆಂಗಳೂರು: ಕೊರೋನಾ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ಜನರನ್ನು ಪರೀಕ್ಷೆ ಮಾಡುವ ಮೇಲೆ ಗಮನ ಕೇಂದ್ರೀಕರಿಸಿರುವುದು ಮತ್ತು ಕೋವಿಡ್ ಪಾಸಿಟಿವ್ ರೋಗಿಗಳಿಂದ ಪ್ರಾಥಮಿಕ ಸಂಪರ್ಕಿತ ಜನರಿಗೆ ಸೋಂಕು ಹರಡುತ್ತಿರುವುದು ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಇಳಿಮುಖವಾಗಲು ಕಾರಣ ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು ಈ ತಿಂಗಳಾಂತ್ಯಕ್ಕೆ ಸ್ಥಿರವಾಗುವ ಸಾಧ್ಯತೆಯಿದೆ. 14 ದಿನಗಳ ಲಾಕ್ ಡೌನ್ ನಿಂದ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಲು ಸಹಾಯವಾಗಬಹುದು, ಪಾಸಿಟಿವ್ ರೋಗಿಗಳ ಸಂಖ್ಯೆ ಕಡಿಮೆಯಾಗಲು ಸಹಾಯವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ರಾಜ್ಯದಲ್ಲಿ 31 ಸಾವಿರದ 183 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು 451 ಸಾವು ಸಂಭವಿಸಿದೆ. ದಿನದ ಪಾಸಿಟಿವ್ ದರ ಶೇಕಡಾ 24.21ರಷ್ಟಿದೆ.
ಮೊನ್ನೆ ಮೇ9ರಂದು 14 ದಿನಗಳ ಲಾಕ್ ಡೌನ್ ಘೋಷಿಸುವ ಮೊದಲು ಕರ್ನಾಟಕದಲ್ಲಿ 47 ಸಾವಿರದ 930 ಹೊಸ ಸೋಂಕಿತ ಪ್ರಕರಣಗಳು 490 ಸಾವು ಸಂಭವಿಸಿತ್ತು. ಪಾಸಿಟಿವ್ ದರ ಶೇಕಡಾ 32.71ರಷ್ಟಿತ್ತು. ಈಗ ಮತ್ತೆ ಜೂನ್ 7ಕ್ಕೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಲಾಕ್ ಡೌನ್ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತಂದು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಾ ಸುದರ್ಶನ್ ಹೇಳಿದ್ದಾರೆ.
Advertisement