ಮಡಿಕೇರಿ: ಇಲ್ಲಿನ ಕೋವಿಡ್-19 ಆಸ್ಪತ್ರೆ ಕಳ್ಳತನದ ಕೇಂದ್ರವಾಗಿ ಹೂರಹೊಮ್ಮಿದ್ದು, ದೂರುಗಳನ್ನು ಸ್ವೀಕರಿಸುವುದರಲ್ಲಿ ಕೊಡಗು ಪೊಲೀಸರು ಬ್ಯುಸಿಯಾಗಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಆಸ್ಪತ್ರೆಯಿಂದ ತಮ್ಮ ಸಂಬಂಧಿಕರಿಗೆ ಸೇರಿದ ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪಿಸಿ ನಿವಾಸಿಗಳು ದೂರು ದಾಖಲಿಸಲು ಮುಂದೆ ಬರುತ್ತಿದ್ದಾರೆ.
ಕುಶಾಲನಗರದ ನಿವಾಸಿ ಮಿಥುನ್ ಅವರ ತಾಯಿ ಕಮಲ (51) ಎಂಬವರು ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೇ 1 ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಿಥುನ್ ತಾಯಿ, ಮೇ 20 ರಂದು ಸೋಂಕಿನಿಂದ ಮೃತಪಟ್ಟಿದ್ದಾರೆ. ಆಕೆಗೆ ಸೇರಿದ್ದ ವಸ್ತುಗಳನ್ನು ಕುಟುಂಬಕ್ಕೆ ವಾಪಸ್ ನೀಡಿದ್ದಾಗ ಕಮಲ ಅವರ 1.5 ಲಕ್ಷ ರೂ.ಮೊತ್ತದ ಮಂಗಳ ಸೂತ್ರ ಕಾಣೆಯಾಗಿರುವುದು ಕಂಡುಬಂದಿದೆ.
ಈ ಬಗ್ಗೆ ಆಸ್ಪತ್ರೆಯಲ್ಲಿ ಕುಟುಂಬಸ್ಥರು ವಿಚಾರಿಸಿದಾಗ, ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವಾಗ ಬೆಲೆ ಬಾಳುವ ಆಭರಣಗಳನ್ನು
ಧರಿಸುವಂತಿಲ್ಲ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ನಂತರ ಮಿಥುನ್
ಮಡಿಕೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ತನಿಖೆ ಮುಂದುವರೆದಿದೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಮತ್ತೊಂದು ನಿವೃತ್ತ ಸೈನಿಕ ಕುಟುಂಬದ ಪರವಾಗಿ ಮಡಿಕೇರಿಯ ನಿವೃತ್ತ ಸೈನಿಕ ನೀಲಕಂಠ ಎಂಬುವರು ದೂರು ದಾಖಲಿಸಿದ್ದಾರೆ. ಧರ್ಮಪ್ಪ ಗೌಡ ಮೃತಪಟ್ಟ ಬಳಿಕ ಅವರಿಗೆ ಸೇರಿದ ವಸ್ತುಗಳನ್ನು ಕುಟುಂಬಸ್ಥರಿಗೆ ವಾಪಸ್ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಧರ್ಮಪ್ಪ ಗೌಡ ಅವರಿಗೆ ಸೇರಿದ ಚಿನ್ನದ ಉಂಗುರ, ಮೊಬೈಲ್, ಸುಮಾರು 6 ಸಾವಿರ ರೂಪಾಯಿ ನಗದು ಹೊಂದಿದ್ದ ಪರ್ಸ್ ನ್ನು ಕುಟುಂಬಸ್ಥರಿಗೆ ವಾಪಸ್ ನೀಡಿಲ್ಲ ಎಂದು ನೀಲಕಂಠ ಆರೋಪಿಸಿದ್ದು, ಈ ಸಂಬಂಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಪೊಲೀಸರು ಈವರೆಗೂ ದೂರು ದಾಖಲಿಸಿಕೊಂಡಿಲ್ಲ.
Advertisement