ರಾಜ್ಯದ ಮೊದಲ ಪಶುಸಂಗೋಪನಾ ವಾರ್ ರೂಮ್ ಶೀಘ್ರ ಆರಂಭ: ಪ್ರಭು ಚವ್ಹಾಣ್

ಜಾನುವಾರು ಸಾಕಾಣಿಕೆಯಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡಲು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಿರ್ಮಿಸಿರುವ ಸುಸಜ್ಜಿತವಾದ ವಾರ್ ರೂಮ್ ಶೀಘ್ರವೇ ಕಾರ್ಯಾರಂಭಗೊಳ್ಳಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಪ್ರಭು ಚವ್ಹಾಣ್
ಪ್ರಭು ಚವ್ಹಾಣ್

ಬೆಂಗಳೂರು: ಜಾನುವಾರು ಸಾಕಾಣಿಕೆಯಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡಲು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಿರ್ಮಿಸಿರುವ ಸುಸಜ್ಜಿತವಾದ ವಾರ್ ರೂಮ್ ಶೀಘ್ರವೇ ಕಾರ್ಯಾರಂಭಗೊಳ್ಳಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಜಾನುವಾರು ಸಾಕಾಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಲು ಸುಸಜ್ಜಿತವಾದ ವಾರ್ ರೂಮ್ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ತಯಾರಾಗಿದ್ದು ರೈತರು, ಜಾನುವಾರು ಸಾಕಾಣೆದಾರರು, ಪ್ರಾಣಿಪ್ರಿಯರು ಇದರ ಅನುಕೂಲ ಪಡೆಯಬಹುದು ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾನುವಾರುಗಳ ಆರೋಗ್ಯ, ಸಾಕುವ ವಿಧಾನ, ಆರೋಗ್ಯ ಸಮಸ್ಯೆ, ತಕ್ಷಣಕ್ಕೆ ಚಿಕಿತ್ಸೆ, ಔಷಧೋಪಚಾರ ಇತ್ಯಾದಿಗಳ ಬಗ್ಗೆ ವಿಷಯ ತಜ್ಞರು ವಾರ್ ರೂಮ್ ಮೂಲಕ ಮಾಹಿತಿ ನೀಡಲಿದ್ದಾರೆ.

ವಾರ್ ರೂಮ್, ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿದ್ದು, ವಿಪತ್ತು ನಿರ್ವಹಣಾ ನಿಯಂತ್ರಣ ಕೇಂದ್ರ (ವಾರ್ ರೂಮ್) ಪಶುಸಂಗೋಪನೆ ಇಲಾಖೆಯ 4212 ಸಂಸ್ಥೆಗಳು, 2900 ಪಶುವೈದ್ಯರು ಮತ್ತು 2200 ಪಶುವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಸೇವೆ ಒದಗಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿಕ್ರಿಯಾ ತಂಡವು ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ವಾರ್ ರೂಮ್ ಗೆ ಕರೆ ಬಂದ ಕೆಲವೆ ಗಂಟೆಗಳಲ್ಲಿ ತಂಡ ಮಾಹಿತಿ ಆಧಾರದ ಮೇಲೆ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರ ನೀಡಲಿದೆ.

ವಾರ್ ರೂಮ್ ವೈಶಿಷ್ಠ್ಯತೆಗಳು

  • ದಿನದ ೨೪ ಗಂಟೆ ಸೇವೆ ಲಭ್ಯ. ಟೋಲ್ ಫ್ರೀ ನಂಬರ್ ವ್ಯವಸ್ಥೆ
  • ಪಶುಸಂಗೋಪನಾ ಕ್ಷೇತ್ರದಲ್ಲಿನ ಅಧುನಿಕ ವಿಧಾನಗಳ ಬಗ್ಗೆ ಈಮೇಲ್, ಹತ್ತಿರದ ಪಶುವೈದ್ಯ ಸಂಸ್ಥೆ, ಮುದ್ರಿತ ಪ್ರತಿ, ಆಡಿಯೋ ವಿಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ನಿರಂತರ ಮಾಹಿತಿ
  • ಇಲಾಖೆಯಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳುವ ರೈತರ ಮೊಬೈಲ್ ಗೆ ಪಶುಗಳಿಗೆ ನೀಡಲಾಗುವ ಲಸಿಕೆ, ರೋಗೊದ್ರೇಕ ಸಾಧ್ಯತೆ ಬಗ್ಗೆ ಮಾಹಿತಿ
  • ವಾರ್ ರೂಮ್ ಸಂಪರ್ಕಿಸಿದಾಗ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಚಿಕಿತ್ಸೆಯ ವ್ಯವಸ್ಥೆ
  • ಬೀಡಾಡಿ ದನ ಹಾಗೂ ಇತರೆ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ನೀಡುವ ದೂರನ್ನು ಆಧರಿಸಿ ಹತ್ತಿರದ ಪಶುವೈದ್ಯರಿಂದ ಚಿಕಿತ್ಸೆ
  • ಇಲಾಖೆಯಿಂದ ಅನುಷ್ಟಾನಗೊಳ್ಳುತ್ತಿರುವ ಯೋಜನೆಗಳ ವಿವರ, ಅವುಗಳನ್ನು ಪಡೆಯಲು ಬಳಸಬೇಕಾದ ಪ್ರಕ್ರಿಯೆ, ಡೈರಿ, ಹಂದಿ ಸಾಕಾಣಿಕೆ, ಮೇಕೆ, ಕೋಳಿ ಇತ್ಯಾದಿಗಳ ಸಾಕಾಣಿಕೆ ವಿವರ
  • ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೋಂದಾಯಿತ ರೈತರ ಮೋಬೈಲ್ ಗೇ ಎಸ್.ಎಮ್.ಎಸ್ ಅಲರ್ಟ್
  • ವಿವಿಧ ಜಾನುವಾರುಗಳ ಮಾರುಕಟ್ಟೆ ಲಭ್ಯತೆ, ದರಗಳ ಕುರಿತು ಮಾಹಿತಿ
  • ಸ್ಥಳಿಯ/ವಿದೇಶಿ ಪಶು ತಳಿಗಳ ಬಗ್ಗೆ ಮಾಹಿತಿ.
  • ಬ್ಯಾಂಕ್ ಗಳಿಂದ ಸಾಲದ ಸೌಲಭ್ಯದ ಮಾಹಿತಿ
  • ಮೇವಿನ ಉತ್ಪಾದನೆ, ಮೇವಿನ ಬೀಜಗಳ ಕಿಟ್ ಕುರಿತು ಮಾಹಿತಿ
  • ತಂತ್ರಜ್ಞಾನ ಬಳಸಿ ಗೋಶಾಲೆಗಳ ನಿರ್ವಹಣೆ ಮತ್ತು ಮಾಹಿತಿ
  • ಗೋಹತ್ಯೆ ಪ್ರತಿಬಂಧಕ ಕಾಯ್ದೆ ಅನುಷ್ಟಾನದ ಕುರಿತಾಗಿ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಯಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ಮಾಹಿತಿ
  • ಪಶುಸಂಜೀವಿನಿ, ಅಂಬುಲೇಟರಿ ಕ್ಲಿನಿಕ್ ಗಳನ್ನು ತಜ್ಞ ವೈದ್ಯರೊಂದಿಗೆ ಚಿಕಿತ್ಸೆಗೆ ವ್ಯವಸ್ಥೆ
  • ತಜ್ಞರೊಂದಿಗೆ ಜಾನುವಾರುಗಳ ಆರೋಗ್ಯ, ಆಹಾರ, ಔಷಧಿಗಳ ಕುರಿತು ಸಂವಹನ ವ್ಯವಸ್ಥೆ
  • ಚಿಕಿತ್ಸಾಲಯಗಳಲ್ಲಿ ವೈದ್ಯರ ಲಭ್ಯತೆಯನ್ನು ತಂತ್ರಜ್ಞಾನ ಆಧಾರಿತವಾಗಿ ತಿಳಿಸುವ ವ್ಯವಸ್ಥೆ.
  • ಲಭ್ಯ ತಂತ್ರಜ್ಞಾನವನ್ನು ಬಳಸಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಮಾಹಿತಿ ತಲುಪಿಸುವುದು ಹಾಗೂ ರೈತರಿಗೆ ಅವರ ಕುಂದುಕೊರತೆಗಳ ಬಗ್ಗೆ ದೂರವಾಣಿ ಮೂಲಕ ನೀಡುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಪರಿಹಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com