ರಾಜ್ಯದಲ್ಲಿ ಕೊರೋನಾ ಹೆಚ್ಚಳ; ಚಿಕಿತ್ಸೆಗೆ ತಮಿಳುನಾಡಿನತ್ತ ಮುಖ ಮಾಡಿದ ಗಡಿ ಪ್ರದೇಶದ ಗ್ರಾಮಸ್ಥರು!
ಮೈಸೂರು: ಚಾಮರಾಜನಗರ ಜಿಲ್ಲೆ ಆಕ್ಸಿಜನ್ ದುರಂತ ಸಂಭವಿಸಿದ ಬಳಿಕ ಆತಂಕಕ್ಕೊಳಗಾಗಿ ಹಾಗೂ ಹತ್ತಿರದಲ್ಲಿ ಕೋವಿಡ್ ಕೇರ್ ಕೇಂದ್ರ ಸೌಲಭ್ಯಗಳು ದೊರೆಯದ ಕಾರಣ ಗಡಿ ಗ್ರಾಮಗಳಲ್ಲಿರುವ ರಾಜ್ಯದ ಜನತೆ ಇದೀಗ ಕೊರೋನಾ ಚಿಕಿತ್ಸೆಗಾಗಿ ತಮಿಳುನಾಡು ರಾಜ್ಯದತ್ತ ಮುಖ ಮಾಡಿದ್ದಾರೆಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕೊರೋನಾ 2ನೇ ಅಲೆ ವ್ಯಾಪಕಗೊಂಡಿದ್ದು, ಗ್ರಾಮೀಣ ಭಾಗದ ಜನರು ಅತ್ಯಂತ ವೇಗವಾಗಿ ಸೋಂಕಿಗೊಳಗಾಗುತ್ತಿದ್ದಾರೆ. ಗೋಪಿನಾಥಪುರಂ, ಮರ್ಟಳ್ಳಿ, ನಲ್ಲೂರು, ನಲ್ಲ ರಸ್ತೆ ಹಾಗೂ ಇತರೆ ಗ್ರಾಮಗಳಲ್ಲಿರುವ ಜನರು ಮೆಟ್ಟೂರು, ಕೊಲ್ಲಾತ್ತೂರು, ಸತ್ಯಮಂಗಳಂ, ಸೇಲಂ ಸೇರಿದೆತೆ ತಮಿಳುನಾಡಿನ ಇತರೆ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುಪತ್ತಿದ್ದಾರೆ.
ಜಿಲ್ಲಾ ಪ್ರಧಾನ ಕಚೇರಿ ಗ್ರಾಮದಿಂದ 180 ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗಿ ನಮಗೆ ಹತ್ತಿರವಾಗುವ ಕಡೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದೇವೆಂದು ಗ್ರಾಮಸ್ಥರು ಹೇಳಿದ್ದಾರೆ.
ನೆಲ್ಲೂರು ಗ್ರಾಮದ ನಿವಾಸಿ ಮಣಿ ಎಂಬುವವರು ಮಾತನಾಡಿ, ಕೆಲ ದಿನಗಳ ಹಿಂದಷ್ಟೇ ನನಗೆ ಲಕ್ಷಣಗಳು ಕಾಣಿಸಿಕೊಂಡಿತ್ತು. ಬಳಿಕ ಪರೀಕ್ಷೆಗೆ ಸ್ಯಾಂಪಲ್ ನೀಡಲಾಗಿತ್ತು. ಆದರೆ, ಪರೀಕ್ಷಾ ವರದಿ ಬರಲು 4 ದಿನವಾಯಿತು. ಹೀಗಾಗಿ ನಾನು ಕೊಲ್ಲತ್ತೂರಿಗೆ ತೆರಳಿ ಆಸ್ಪತ್ರೆಗೆ ದಾಖಲಾಗಲು ನಿರ್ಧರಿಸಿದ್ದೆ. ನಲ್ಲ ರಸ್ತೆ, ಮರ್ಟಳ್ಳಿ ಪಂಚಾಯತ್ ಸೇರಿದಂತೆ ಹಲವು ಗಡಿ ಗ್ರಾಮದ ಜನರೂ ಇದೇ ರೀತಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಸೋಂಕು ಕಾಣಿಸಿಕೊಂಡ ಕೂಡಲೇ ಸೋಂಕಿತರ ವ್ಯಕ್ತಿಗಳು ನಾಪತ್ತೆಯಾಗುತ್ತಿರುವುದು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚಲು ಜಿಲ್ಲಾ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬಗ್ಗೆ ವಿಚಾರ ತಿಳಿದ ಕೂಡಲೇ ಜಿಲ್ಲಾ ಸಚಿವ ಎಸ್.ಸುರೇಶ್ ಕುಮಾರ್ ಹಾಗೂ ಉಪ ಆಯುಕ್ತ ಎಂಆರ್.ರವಿಯವರು ಗ್ರಾಮಗಳಿಗೆ ಭೇಟಿ ನೀಡಿದ್ದು, ಹೆಣ್ಣೂರು ಹಾಗೂ ಮಲ್ಲೆಮಹದೇಶ್ವರ ಬೆಟ್ಟದ ಬಳಿಯಿರುವ ಕೋವಿಡ್ ಕೇರ್ ಕೇಂದ್ರಗಳ ವ್ಯವಸ್ಥೆ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.