ಹಂತ ಹಂತವಾಗಿ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸಲು ರಾಜ್ಯ ಸರ್ಕಾರ ಚಿಂತನೆ: ಸಚಿವ ಆರ್. ಅಶೋಕ್

ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ದಿನವೊಂದಕ್ಕೆ 1 ಸಾವಿರಕ್ಕಿಂತಲೂ ಕಡಿಮೆಯಾದಾಗ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಿ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ದಿನವೊಂದಕ್ಕೆ 1 ಸಾವಿರಕ್ಕಿಂತಲೂ ಕಡಿಮೆಯಾದಾಗ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಿ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಒಂದು ಕ್ಷೇತ್ರದ ನಂತರ ಮತ್ತೊಂದು ಕ್ಷೇತ್ರ ತೆರೆಯುವ ಮೂಲಕ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿರುವುದಾಗಿ ಸುದ್ದಿಗಾರರಿಗೆ ಅಶೋಕ್ ತಿಳಿಸಿದರು.

ಜೂನ್ 7ರಿಂದ ನಿರ್ಬಂಧ ತೆರವು ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಹಂತ ಹಂತವಾಗಿ ನಿರ್ಬಂಧ ಸಡಿಲಗೊಳಿಸಲು ಕೆಲ ಕ್ಷೇತ್ರಗಳಿಂದ ಮನವಿ ಬಂದಿದೆ. ಆದಾಗ್ಯೂ, ಸೋಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಲಾಕ್ ಡೌನ್ ಮುಂದುವರೆಯಲಿದೆ. ಸೋಂಕು ಕಡಿಮೆಯಾದಾಗ ಮಾತ್ರ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ದಿನವೊಂದಕ್ಕೆ ಸೋಂಕಿನ ಪ್ರಮಾಣ 1ಕ್ಕಿಂತಲೂ ಕಡಿಮೆಯಾಗಬೇಕು ಇದು 2 ಸಾವಿರದಿಂದ ಮೂರು ಸಾವಿರ ಮಿತಿ ಮೀರಬಾರದು. ನಂತರವಷ್ಟೇ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಲು ಪರಿಗಣಿಸಲಿದೆ ಎಂದು ಅವರು ತಿಳಿಸಿದರು. ಅವರ ಪ್ರಕಾರ ಲಾಕ್ ಡೌನ್ ನಿಂದ ಕೋವಿಡ್-19 ಸೋಂಕು ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ.

ಜೂನ್ 6 ರಂದು ಮುಖ್ಯಮಂತ್ರಿ ಸಚಿವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರವಷ್ಟೇ ಲಾಕ್ ಡೌನ್ ಬಗ್ಗೆ
ಅಂತಿಮ ನಿರ್ಧಾರ ಹೊರಬೀಳಲಿದೆ. ಜನರ ಹಿತಾಸಕ್ತಿಗನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶೋಕ್ ತಿಳಿಸಿದರು.

ಈ ಮಧ್ಯೆ ಬೆಂಗಳೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಹಂತ ಹಂತವಾಗಿ ಲಾಕ್ ಡೌನ್ ತೆರವು ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕೋವಿಡ್-19 ಪ್ರಕರಣಗಳು ಕಡಿಮೆಯಾದರೆ ನಿರ್ಬಂಧಗಳನ್ನು ಹಂತ-ಹಂತವಾಗಿ ಸಡಿಲಗೊಳಿಸಲಾಗುವುದು, ಅಧಿಕಾರಿಗಳು ಕೂಡಾ ಇದನ್ನೇ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com