ಬೆಂಗಳೂರು: ಸಾರಿಗೆ ಸೇವೆ, ಅಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಚಿವರು ಈ ನಿಟ್ಟಿನಲ್ಲಿ ಟ್ವೀಟ್ ಮಾಡಿದ್ದು "ಕೋವಿಡ್ ಪಿಡುಗನ್ನು ತಡೆಯುವ ಪ್ರಯತ್ನದ ಅಂಗವಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಾರಿಗೆ ಸೇವೆ, ಅಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
"ಈ ಸಹಾಯವಾಣಿಯ ನಂಬರ್ 9449 86 3214. ವಿಳಾಸ: ಸಾರಿಗೆ ಆಯುಕ್ತರ ಕಛೇರಿ, 1ನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು- 27
"ಸಾರಿಗೆ ಸೇವೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಕುಂದುಕೊರತೆಗಳಿದ್ದಲ್ಲಿ ಸಾರ್ವಜನಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಿ ಉಪಯೋಗ ಪಡೆದುಕೊಳ್ಳಬಹುದು.
"ಕೋವಿಡ್ ರೋಗದಿಂದ ತೊಂದರೆಗೆ ಒಳಗಾಗಿರುವ ಸೋಂಕಿತರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂಬುಲೆನ್ಸ್ ಸೇವೆಗೂ ಸರ್ಕಾರ ಸೂಕ್ತ ದರವನ್ನು ನಿಗದಿಪಡಿಸಿದ್ದು, ಆ ಪ್ರಕಾರವೇ ಅಂಬುಲೆನ್ಸ್ ಸೇವೆಗೆ ಅಂಬುಲೆನ್ಸ್ ವಾಹನಗಳ ಮಾಲೀಕರು ದರ ವಿಧಿಸಬೇಕಾಗಿದೆ.
"ಆದರೆ ಕೆಲವು ಪ್ರಕರಣಗಳಲ್ಲಿ ಅಂಬುಲೆನ್ಸ್ ಸೇವೆಗೆ ಸಾರ್ವಜನಿಕರಿಂದ ಅಧಿಕ ಶುಲ್ಕ ಸಂಗ್ರಹಿಸುತ್ತಿರುವ ಆರೋಪಗಳು ವ್ಯಕ್ತವಾಗಿವೆ. ಇದು ಸರಿಯಲ್ಲ. ಒಂದು ವೇಳೆ ಸರ್ಕಾರದ ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚು ಹಣವನ್ನು ಯಾರೇ ಸಂಗ್ರಹಿಸಿ ನಿಯಮ ಉಲ್ಲಂಘಿಸಿದರೂ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು" ಎಂದಿದ್ದಾರೆ.
Advertisement