ಹುಲಿ ಹಲ್ಲು ಕಳ್ಳ ಸಾಗಣೆ ಜಾಲ ಭೇದಿಸಿದ ಮಡಿಕೇರಿ ಪೊಲೀಸರು, ನಾಲ್ವರ ಬಂಧನ

ಹುಲಿ ಹಲ್ಲುಗಳನ್ನು ಮಾರಾಟ ಮಾಡುೃತ್ತಿದ್ದ ಬೃಹತ್ ಜಾಲವನ್ನು ಮಡಿಕೇರಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ತಾಲ್ಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯ ಘಟಕ ಯಶಸ್ವಿಯಾಗಿದೆ.
ಅರಣ್ಯಾಧಿಕಾರಿಗಳಿಂದ ಹುಲಿ ಹಲ್ಲು ವಶಕ್ಕೆ
ಅರಣ್ಯಾಧಿಕಾರಿಗಳಿಂದ ಹುಲಿ ಹಲ್ಲು ವಶಕ್ಕೆ

ಮಡಿಕೇರಿ: ಹುಲಿ ಹಲ್ಲುಗಳನ್ನು ಮಾರಾಟ ಮಾಡುೃತ್ತಿದ್ದ ಬೃಹತ್ ಜಾಲವನ್ನು ಮಡಿಕೇರಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ತಾಲ್ಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯ ಘಟಕ ಯಶಸ್ವಿಯಾಗಿದೆ.

ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳು, ಗೋಣಿಕೊಪ್ಪದ ಚೆನ್ನಂಗೊಲ್ಲಿ ಬಸ್ ತಂಗುದಾಣದ ಬಳಿ ದಾಳಿ ಮಾಡಿ ಅಕ್ರಮವಾಗಿ ಹುಲಿ ಹಲ್ಲುಗಳನ್ನು ಮಾರಾಟ ಮಾಡಲು  ಮುಂದಾಗಿದ್ದವರನ್ನು ಬಂದಿಸಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಸುಳುಗೋಡು ಗ್ರಾಮದ ಗಣೇಶ್ ವೈ.ಸಿ. (20), ಕೋತೂರು ಗ್ರಾಮದ ಸಂತೋಷ್ ಕೆ.ವಿ (25), ಸುಳುಗೋಡು ಗ್ರಾಮದ ಸಂತೋಷ್ ಕುಮಾರ್ ಹೆಚ್.ಆರ್ (29) ಹಾಗೂ ಚಿಕ್ಕಮಂಡೂರು ಗ್ರಾಮದ ಪೆಮ್ಮಂಡ ಪವನ್ ಪೂವಯ್ಯ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಹುಲಿಯ ಆರು ಹಲ್ಲುಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 

ಸಿ.ಐ.ಡಿ, ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್‌ಚಂದ್ರ, ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅಧೀಕ್ಷಕ ಎಸ್.ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಉಪನಿರೀಕ್ಷಕರಾದ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ.ಮಂಜುನಾಥ್, ದೇವಯ್ಯ.ಕೆ.ಎಸ್, ಬೀನ.ಸಿ.ಬಿ ಹಾಗೂ ತಿತಿಮತಿ ಉಪ ವಿಭಾಗದ ಎ.ಸಿ.ಎಫ್ ಉತ್ತಯ್ಯ ಪಿ.ಪಿ, ವಲಯ ಅರಣ್ಯಾಧಿಕಾರಿ ಅಶೋಕ್ ಪಿ.ಹುನಗುಂದ, ಉಪವಲಯ ಅರಣ್ಯ ಸಿಬ್ಬಂದಿಗಳಾದ ಹಾಲೇಶ್ ಎಂ.ಸಿ, ಟಿ.ಜಿ.ಸುರೇಶ್, ಜಿ.ಎಸ್.ರೇವಪ್ಪ, ದರ್ಶನ್ ಎಂ. ಹಾಗೂ ಗಗನ್.ಬಿ.ಎ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಖರೀದಿದಾರರಂತೆ ವೇಷ ಧರಿಸಿದ್ದ ಅರಣ್ಯಾಧಿಕಾರಿಗಳು ಕೆಲ ದಿನಗಳ ಹಿಂದೆ ಪವನ್ ಅವರನ್ನು ಸಂಪರ್ಕಿಸಿ ಹುಲಿಯ ಒಂದು ಹಲ್ಲಿಗೆ 25 ಸಾವಿರ ರೂ.ನಂತೆ ಖರೀದಿಸುವುದಾಗಿ ಭರವಸೆ ನೀಡಿದ್ದರು. ಬುಧವಾರ, ಪವನ್ ಅವರು ಅಧಿಕಾರಿಗಳನ್ನು (ಖರೀದಿದಾರರ ವೇಷದಲ್ಲಿ) ಚೆನ್ನಗೊಲ್ಲಿಯ ಬಸ್ ನಿಲ್ದಾಣದಲ್ಲಿ ಭೇಟಿಯಾಗಲು ಕರೆದರು. ಅಧಿಕಾರಿಗಳು ನಿಗದಿತ ಸ್ಥಳದಲ್ಲಿ ಕಾಯುತ್ತಿರುವಾಗ, ಪವನ್ ಇತರ ಮೂವರು ಆರೋಪಿಗಳೊಂದಿಗೆ ಆಗಮಿಸಿ ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದರು. ಈ ವೇಳೆ ಅರಣ್ಯ ಇಲಾಖೆಯ ಇತರೆ ಸಿಬ್ಬಂದಿ ಹೊಂಚು ಹಾಕಿ ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯ ಕೋಶದ ಸಿಐಡಿ ಎಸ್‌ಪಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ಎಸ್‌ಐ ವೀಣಾ ನಾಯಕ್, ಸಿಬ್ಬಂದಿ ಮಂಜುನಾಥ್, ದೇವಯ್ಯ, ಬೀನಾ ಮತ್ತಿತರರು ದಾಳಿ ನಡೆಸಿದ್ದರು. ಆರೋಪಿಗಳ ವಿರುದ್ಧ ಭಾರತೀಯ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.  ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಂತೆಯೇ ಬಂಧಿತರಿಂದ 1.50 ಲಕ್ಷ ಮೌಲ್ಯದ ಆರು ಹುಲಿ ಹಲ್ಲುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರತೀ  ಹಲ್ಲಿಗೆ ಆರೋಪಿಗಳು ತಲಾ 25 ಸಾವಿರ ರೂ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com