ಬೆಂಗಳೂರಲ್ಲಿ ಮಳೆ ಜೊತೆ ಕೊರೆವ ಚಳಿ: ಬಿಸಿಬಿಸಿ ಕಾಫಿ, ಬಜ್ಜಿ-ಬೋಂಡಾ-ಪಕೋಡದಿಂದ ಹಿಡಿದು ಹಾಳಾದ ರಸ್ತೆವರೆಗೆ ಟ್ವೀಟಿ!

ವಾಯುಭಾರ ಕುಸಿತದಿಂದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು ತಾಪಮಾನ ಕೂಡ ಇಳಿಕೆಯಾಗಿದೆ. ಮಳೆಯ ನಡುವೆ ಕೊರೆಯುವ ಚಳಿ ಕೂಡ ಇದೆ. ಈ ಸಂದರ್ಭದಲ್ಲಿ ಅನೇಕ ನೆಟ್ಟಿಗರು ಟ್ವಿಟ್ಟರ್, ಸೋಷಿಯಲ್ ಮೀಡಿಯಾದಲ್ಲಿ ನಗರದ ಪರಿಸ್ಥಿತಿಗಳ ಚಿತ್ರಣ ನೀಡುತ್ತಿದ್ದಾರೆ.
ಬೆಂಗಳೂರಲ್ಲಿ ಮಳೆ ಜೊತೆ ಕೊರೆವ ಚಳಿ: ಬಿಸಿಬಿಸಿ ಕಾಫಿ, ಬಜ್ಜಿ-ಬೋಂಡಾ-ಪಕೋಡದಿಂದ ಹಿಡಿದು ಹಾಳಾದ ರಸ್ತೆವರೆಗೆ ಟ್ವೀಟಿ!

ಬೆಂಗಳೂರು: ವಾಯುಭಾರ ಕುಸಿತದಿಂದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು ತಾಪಮಾನ ಕೂಡ ಇಳಿಕೆಯಾಗಿದೆ. ಮಳೆಯ ನಡುವೆ ಕೊರೆಯುವ ಚಳಿ ಕೂಡ ಇದೆ. ಈ ಸಂದರ್ಭದಲ್ಲಿ ಅನೇಕ ನೆಟ್ಟಿಗರು ಟ್ವಿಟ್ಟರ್, ಸೋಷಿಯಲ್ ಮೀಡಿಯಾದಲ್ಲಿ ನಗರದ ಪರಿಸ್ಥಿತಿಗಳ ಚಿತ್ರಣ ನೀಡುತ್ತಿದ್ದಾರೆ. ಈ ಮಳೆಯ ನಡುವೆ ಆದ ಕೆಲವು ಘಟನೆಗಳು, ಅನುಭವಗಳ ಬಗ್ಗೆ ಕೂಡ ನಗರ ನಿವಾಸಿಗಳು ಟ್ವೀಟ್ ಮಾಡುತ್ತಿದ್ದಾರೆ. ಟ್ವೀಟ್, ವಿಡಿಯೊ, ಫೋಟೋಗಳು ಹವಾಮಾನ ತಾಪಮಾನದಿಂದ ಹಿಡಿದು ಕೊರೆಯುವ ಚಳಿಯಲ್ಲಿ ಬಿಸಿಬಿಸಿ ಕಾಫಿಯ ಜೊತೆಗೆ ನಗರದ ಹೊಂಡ-ಗುಂಡಿ ಬಿದ್ದ ರಸ್ತೆಗಳ ಬಗ್ಗೆ ಚರ್ಚೆಯಾಗುತ್ತಿದೆ.

ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಆಕಾಶದಲ್ಲಿ ದಟ್ಟ ಮೋಡ ಕವಿದಿದ್ದು ಆಕಾಶದಲ್ಲಿ ಬಿಳಿ ಹೊದಿಕೆಯಂತೆ ಇನ್ನು ಕೆಲವೊಮ್ಮೆ ಕಪ್ಪು ಕಾರ್ಮೋಡ ಆವರಿಸಿದೆ. ಜಿಟಿಜಿಟಿ ಮಳೆಯ ನಡುವೆ ಹೊರಗೆ ಕೆಲಸ ಕಾರ್ಯಗಳಿಗೆ ಹೋಗಬೇಕಾದವರಿಗೆ ನಗರದ ಹೊಂಡ-ಗುಂಡಿ ಬಿದ್ದ ರಸ್ತೆಯ ನರಕ ದರ್ಶನವಾಗುತ್ತಿದೆ. 

ಆನ್ ಲೈನ್ ನಲ್ಲಿ ಹಲವರು ಬಿಸಿಬಿಸಿ ಕಾಫಿ, ಟೀ, ಬಜ್ಜಿ, ಬೋಂಡಾ, ವಡೆಗಳ ಫೋಟೋಗಳನ್ನು ಶೇರ್ ಮಾಡುವುದರ ಜೊತೆಗೆ ನಗರದ ಕಳಪೆ ರಸ್ತೆಗಳ ಬಗ್ಗೆಯೂ ಹಿಡಿಶಾಪ ಹಾಕುತ್ತಿದ್ದಾರೆ. ಒಬ್ಬರು ಟ್ವೀಟ್ ಮಾಡಿ ಮಳೆ-ಚಳಿಯ ಮಧ್ಯೆ ಬಿಸಿಬಿಸಿ ಕಾಫಿ ಹೀರೋಣ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಮಳೆಗೆ ಬಿಸಿಬಿಸಿ ಗ್ರೀನ್ ಟೀ ಕರೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಿನ ಶ್ರುತಿಕ ಅಪಾರ್ಟ್ ಮೆಂಟ್ ನ ಹಿರಿಯ ನಿವಾಸಿ ರಾಧಾಕೃಷ್ಣ ಎಂಬುವವರು ಇಂದು ಬೆಳ್ಳಂಬೆಳಗ್ಗೆ ತಮ್ಮ ಮನೆಯ ಮೇಲೆ ಹೋಗಿ ಬೆಂಗಳೂರಿನ ಇಂದಿನ ಹವಾಮಾನದ ಸುಂದರ ದೃಶ್ಯವನ್ನು ಸೆರೆಹಿಡಿದಿದ್ದಾರೆ. 

ಈ ಮಳೆಗೆ ಬೆಂಗಳೂರಿನಲ್ಲಿ ಈಗ ಆಟೋ ಮತ್ತು ಕ್ಯಾಬ್ ಡ್ರೈವರ್ ಗಳು ಕರೆದಲ್ಲಿಗೆ ಬರುತ್ತಿಲ್ಲ, ಹೀಗಾಗಿ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹಲವರು ಬರೆದುಕೊಂಡಿದ್ದಾರೆ. 

ರಾಮಯ್ಯ ಆಸ್ಪತ್ರೆಗೆ ಹೋಗಬೇಕೆಂದು ಒಲಾ ಬುಕ್ ಮಾಡಿದರೆ ಡ್ರೈವರ್ ಒಪ್ಪದೆ ರದ್ದಾಯಿತು, ಯಾವುದೂ ಸಿಗಲಿಲ್ಲವೆಂದು ರಸ್ತೆಯತ್ತ ಹೋದರೆ ಮೂರು ಆಟೋದವರು ಖಾಲಿಯಾಗಿ ಹೋದರೂ ಆಸ್ಪತ್ರೆಗೆ ತುರ್ತಾಗಿ ಹೋಗಲಿದೆ ಎಂದು ಕೇಳಿಕೊಂಡರೂ ಬರಲಿಲ್ಲ ಎಂದು ನಡ್ಜನಾಡಿಕ ಎಂಬುವವರು ತಮ್ಮ ತಳಮಳವನ್ನು ಬರೆದುಕೊಂಡಿದ್ದರು. 

ನನ್ನ ಸ್ನೇಹಿತೆಯೊಬ್ಬಳು ಪಿಜಿಯಿಂದ ನಿನ್ನೆ ಆಟೋದಲ್ಲಿ ಬರುತ್ತಿದ್ದಾಗ ಕುಡುಕನೊಬ್ಬ ಚೂರಿ ಹಿಡಿದು ಖಾಲಿ ರಸ್ತೆಯಲ್ಲಿ ನಿಂತಿದ್ದ. ಆಟೋ ಚಾಲಕನನ್ನು ತಡೆದು ಹಲ್ಲೆಗೆ ಮುಂದಾಗಿದ್ದ. ಆಗ ಚಾಲಕ ಸ್ನೇಹಿತೆಯನ್ನು ದೂರ ತಳ್ಳಿ ಆಗಲಿರುವ ಅನಾಹುತವನ್ನು ತಪ್ಪಿಸಿದ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಬೆಂಗಳೂರಿನ ಹಾಳಾದ ರಸ್ತೆಗಳ ಫೋಟೋ, ಚಿತ್ರಣ, ಪರಿಸ್ಥಿತಿಗಳ ಬಗ್ಗೆ ನಿವಾಸಿಗಳು ಹಾಕಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಹ ಹಿಡಿಶಾಪ ಹಾಕುತ್ತಿದ್ದಾರೆ. 

ನಿನ್ನೆ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಬಂದಿದ್ದರು. ಆಗ ಮೋದಿಜಿಯವರೇ ಬೆಂಗಳೂರಿನ ರಸ್ತೆಗಳನ್ನು ನೋಡಿ ಎಷ್ಟು ಹಾಳಾಗಿ ಹೋಗಿದೆ, ಇದಕ್ಕೆ ಏನಾದರೂ ಪರಿಹಾರ ನೀಡಿ ಎಂದು ಟ್ವೀಟ್ ಮಾಡಿ ಪ್ರಧಾನಿಯವರಿಗೆ, ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com