ರಾಷ್ಟ್ರೀಯ ಪತ್ರಿಕಾ ದಿನಾಚರಣೆ: 'ಧಾವಂತದ ಸುದ್ದಿ, ಎಡವಟ್ಟು ಬೇಡ'; ಸಿಎಂ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ಅಭಿಪ್ರಾಯ

ನಾವೇ‌ ನೊಟ್ಟ ಮೊದಲು ಸುದ್ದಿ ಕೊಡಬೇಕೆನ್ನುವ ಧಾವಂತದಲ್ಲಿ ಎಡವಟ್ಟುಗಳನ್ನು ಮಾಡುವ ಕಾರ್ಯವನ್ನು ಮಾಧ್ಯಮದವರು ಮಾಡಬಾರದು ಎಂದು ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿ ಜಿ.‌ಜಗದೀಶ್ ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಜಂಟಿ ಕಾರ್ಯದರ್ಶಿ ಜಿ.ಜಗದೀಶ್
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಜಂಟಿ ಕಾರ್ಯದರ್ಶಿ ಜಿ.ಜಗದೀಶ್

ಬೆಂಗಳೂರು: ನಾವೇ‌ ಮೊಟ್ಟ ಮೊದಲು ಸುದ್ದಿ ಕೊಡಬೇಕೆನ್ನುವ ಧಾವಂತದಲ್ಲಿ ಎಡವಟ್ಟುಗಳನ್ನು ಮಾಡುವ ಕಾರ್ಯವನ್ನು ಮಾಧ್ಯಮದವರು ಮಾಡಬಾರದು ಎಂದು ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿ ಜಿ.‌ಜಗದೀಶ್ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಕರ್ನಾಟಕ ಮಾಧ್ಯಮ‌ ಅಕಾಡೆಮಿ‌ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಮಾಧ್ಯಮ ಕಂಡರೆ ಯಾರಿಗೆ ಭಯವಿಲ್ಲ ವಿಚಾರಗೋಷ್ಠಿ‌ ಉದ್ಘಾಟಿಸಿ ಮಾತನಾಡಿದರು. "ಅವಸರದಲ್ಲಿ ಬ್ರೇಕಿಂಗ್ ಕೊಡುವಾಗ ಪ್ರಮಾದಗಳಾಗುತ್ತವೆ ಎಂಬುದಕ್ಕೆ ಅವರು ತಮ್ಮ ಅನುಭವವನ್ನೇ ಉದಾಹರಣೆಯನ್ನಾಗಿ ನೀಡಿದರು. ಶಿರಸಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಟಿವಿಯೊಂದರಲ್ಲಿ ವಿಭಾಗಾಧಿಕಾರಿ ಜಗದೀಶ್ ಹಠಾತ್ ಮರಣ ಎಂಬ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಕ್ಷೇತ್ರದ‌ ಶಾಸಕರು ಮಂತ್ರಿಯಾಗಿದ್ದರು. ‌ಅವರು ಗಾಬರಿಯಿಂದ ವಿಚಾರಿಸಿದ್ದರು. ನನ್ನ ಪತ್ನಿ, ಪೋಷಕರು ನೋಡಿದ್ದರೆ ಅವರಿಗೆ ಹೃದಯಾಘಾತವಾಗುತ್ತಿತ್ತೇನೋ ಎಂದು ಆತಂಕ ವ್ಯಕ್ತಪಡಿಸಿದರು. ‌ಯಾವುದೇ ಸುದ್ದಿ ನೀಡುವ ಮುನ್ನ ಎರಡೆರಡು ಬಾರಿ ಖಚಿತಪಡಿಸಿಕೊಳ್ಳಿ" ಎಂದು ಸಲಹೆ ನೀಡಿದರು.

"ಕಳೆದ 14 ವರ್ಷಗಳ ತಮ್ಮ ಸರ್ಕಾರಿ ಸೇವಾವಧಿಯಲ್ಲಿ ಸಂಘರ್ಷ ಮಾಡಿಕೊಂಡಿಲ್ಲ. ಮಾಧ್ಯಮಗಳಿಂದ ಸರ್ಕಾರದ ನೀತಿ ನಿರೂಪಣೆಯನ್ನು ತಕ್ಷಣ ತಿಳಿಸುವುದು ಸಾಧ್ಯ. ನಮ್ಮದು ದೊಡ್ಡ ಪ್ರಜಾಪ್ರಭುತ್ವ. ‌ಮಾಧ್ಯಮ‌ ನಾಲ್ಕನೆ ಅಂಗ. ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣ ಇರಬೇಕು" ಎಂದರು.

"ಪತ್ರಕರ್ತರು ಅಂದರೆ ವರದಿ ಮಾಡುವುದು. ಆದರೆ ಕೆಲವರು ನ್ಯೂಸ್ ಕ್ರಿಯೇಟ್ ಮಾಡುತ್ತಾರೆ. ಇದು ಸರಿಯಾದ ಕೆಲಸವಲ್ಲ. ಇದ್ದಿದ್ದನ್ನು ವರದಿ ಮಾಡಬೇಕು. ‌ಇದರಿಂದ ಸಮಾಜವನ್ನು ಎಚ್ಚರಿಸಬೇಕು. ಮಾಧ್ಯಮದವರು ಸರ್ಕಾರದ ರಚನಾತ್ಮಕ ಟೀಕಾಕಾರರು. ಪ್ರತಿಪಕ್ಷಗಳ ಮಿತ್ರರು ಎಂದು ಅಭಿಪ್ರಾಯ ಪಟ್ಟರು. ಸಮಾಜದ‌ ಕಣ್ಣುಕಿವಿ ಮಾಧ್ಯಮ.‌ ಇವುಗಳಿಂದ ಎಷ್ಟೋ ಸಮಸ್ಯೆಗಳು ಬಗೆಹರಿದಿವೆ"‌ ಎಂದರು.

ಖ್ಯಾತನಟ ರಮೇಶ್ ಅರವಿಂದ್ ಮಾತನಾಡಿದರು. "ನಾನು ಜನರಿಗೆ ಗೊತ್ತಾಗಿದ್ದು ಮಾಧ್ಯಮಗಳಿಂದ. ಮೀಡಿಯಾದಿಂದ ಅಪಾರ ಜನರನ್ನು ತಲುಪುತ್ತೇವೆ. ಅದು ಶಕ್ತಿ, ಪದಗಳ ಜಾದೂ. ಮೈಂಡ್ ಬದಲಾಯಿಸುವ ಶಕ್ತಿಯಿದೆ. ನಾನು ಎಡವಿದಾಗ ಮಾಧ್ಯಮ‌ ಮಿತ್ರರು ತಿದ್ದಿದ್ದಾರೆ. ಸೋಶಿಯಲ್‌ ಮೀಡಿಯಾ ಬಂದ ನಂತರ ಎಲ್ಲರೂ ಮೀಡಿಯಾದವರೇ ಆಗಿದ್ದಾರೆ. ಪ್ರತಿಯೊಬ್ಬರಿಗೂ ಅಲ್ಲಿ ಅವಕಾಶವಿದೆ. ವೇದಿಕೆಯಿದೆ. ಅದು ಮೈಕ್ ಆಗಿದೆ. ಮೀಡಿಯಾ ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತಿತ್ತು" ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನಿರೂಪಿಸಿದರು. "ಕಾರ್ಯನಿರತ ಪತ್ರಕರ್ತರ ಸಂಘದ ಹೋರಾಟದ ಫಲವಾಗಿ ಮಾಧ್ಯಮ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ಈಗ ಒಂದು ಕೋಟಿ ಅನುದಾನ ಬಂದಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ" ಎಂದರು.

ಮಾಧ್ಯಮ ಕಂಡರೆ ಯಾರಿಗೆ ಭಯವಿಲ್ಲ ಎಂಬ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ ಅವರು, "ಶ್ರಮಿಕ ವರ್ಗ, ರೈತಾಪಿ ವರ್ಗಕ್ಕೆ ಮಾಧ್ಯಮ‌ ಕಂಡರೆ ಭಯವಿಲ್ಲ. ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ" ಎಂದು ಅಭಿಪ್ರಾಯಪಟ್ಟರು.

ಮಾಧ್ಯಮ‌ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿದರು. "ರಾಷ್ಟ್ರೀಯ ‌ದಿನಾಚರಣೆಯನ್ನು ಮಂಗಳೂರಿನಲ್ಲಿ ಮಾಡಬೇಕು ಅಂತ ಇತ್ತು.‌ ಚುನಾವಣೆ ನೀತಿ ಸಂಹಿತೆಯಿಂದದಾಗಿ ಬೆಂಗಳೂರಿನಲ್ಲಿ ಮಾಡಿದೆವು. ಮಾಧ್ಯಮಗಳ ಎಲ್ಲ ವಿಭಾಗದವರು ಬಂದಿದ್ದಾರೆ" ಎಂದರು.

"ಮಾಧ್ಯಮ‌ ಅಕಾಡೆಮಿ 40ನೇ ವರ್ಷದ ಸಂಭ್ರಮದಲ್ಲಿದೆ. 40 ಪುಸ್ತಕ ತರುವ ಯೋಜನೆಯಿದೆ. ಈಗಾಗಲೇ ಆಚರಣೆ ಆರಂಭಿಸಿದ್ದೇವೆ" ಎಂದು ಮಾಹಿತಿ ನೀಡಿದರು. ಹಿರಿಯ ಪತ್ರಕರ್ತರು, ಮಾಧ್ಯಮ‌ ಅಕಾಡೆಮಿಯ ಸದಸ್ಯರುಗಳು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com