ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಅಂದು ಮಗನಿಂದಲೇ ಕೊಲೆಯಾಗುತ್ತಿದ್ದೆ ಎಂದ ಶಂಕರ್

ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿರುವ ಹಲ್ಲೆಗೇರೆ ಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಶಂಕರ್ ಕುಟುಂಬಸ್ಥರು
ಆತ್ಮಹತ್ಯೆ ಮಾಡಿಕೊಂಡ ಶಂಕರ್ ಕುಟುಂಬಸ್ಥರು

ಬೆಂಗಳೂರು: ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿರುವ ಹಲ್ಲೆಗೇರೆ ಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ತನ್ನನ್ನು ಕೊಲೆ ಮಾಡಲು ಮಗ ಮಧುಸಾಗರ್ ಮುಂದಾಗಿದ್ದ ಎಂಬ ವಿಚಾರವನ್ನು ಪೊಲೀಸರ ಎದುರು ಶಂಕರ್ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸೆ.12 ರಂದು 10 ಲಕ್ಷ ಕೊಡ್ತೇನೆ ಬಾ ಎಂದು ಮಗ ಶಂಕರ್ ಗೆ ಮೆಸೇಜ್ ಮಾಡಿದ್ದನು. ಮೆಸೇಜ್‍ಗೆ ರಿಪ್ಲೈ ಮಾಡದಿದ್ದಾಗ ಮಧುಸಾಗರ್ ತನ್ನ ತಂದೆಗೆ 3 ಬಾರಿ ಕಾಲ್ ಮಾಡಿದ್ದ. ಕೊನೆ ಕರೆ ವೇಳೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅಮ್ಮ-ಅಕ್ಕಂದಿರು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಅಪ್ಪನನ್ನು ಜೀವಂತವಾಗಿ ಉಳಿಸುವುದು ಬೇಡ ಎಂದು ತೀರ್ಮಾನಿಸಿದ್ದ. ಮಗನ ಮಾತು ನಂಬಿ ನಾನು ಮನೆಗೆ ಹೋಗಿದ್ದರೆ ಅಂದೇ ಕೊಲೆ ಆಗುತ್ತಿದ್ದೆ ಎಂದು ಹಲ್ಲೇಗೆರೆ ಶಂಕರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಶಂಕರ್ ಕೊಟ್ಟ ಈ ಮಾಹಿತಿಗೂ, ಸಿಕ್ಕ ಟೆಕ್ನಿಕಲ್ ಸಾಕ್ಷಿಗೂ ತಾಳೆಯಾಗುತ್ತಿರುವುದಾಗಿ ತಿಳಿದುಬಂದಿದೆ.

ಸೆ.17ರಂದು ಒಂದೇ ಕುಟುಂಬದ ಐವರ ದಾರುಣ ಸಾವು ಪ್ರಕರಣ ಬೆಳಕಿಗೆ ಬಂದಿತ್ತು.‌‌ ದುರ್ಘಟನೆಯಲ್ಲಿ ಶಂಕರ್ ಪತ್ನಿ ಭಾರತಿ, ಮಕ್ಕಳಾದ ಸಿಂಚನಾ, ಸಿಂಧೂರಾಣಿ, ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡರೆ 9 ತಿಂಗಳ ಹಸುಗೂಸನ್ನು ಆಕೆಯ ತಾಯಿ ಸಿಂಧೂರಾಣಿಯೇ ಕೊಲೆ ಮಾಡಿದ್ದಳು. ಸಾವಿಗೂ ಮುನ್ನ ಮಕ್ಕಳು ಬರೆದಿದ್ದ ಡೆತ್ ನೋಟ್​​​ನಲ್ಲಿ ಶಂಕರ್ ಹಾಗೂ ಅಳಿಯಂದಿರ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು.

ಕುಟುಂಬಸ್ಥರ ಆತ್ಮಹತ್ಯೆಗೆ ಪರೋಕ್ಷ ಪ್ರಚೋದನೆ ನೀಡಿರುವ ಆರೋಪದಡಿ ಶಂಕರ್ ಹಾಗೂ ಇಬ್ಬರೂ ಅಳಿಯಂದಿರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com